ನವದೆಹಲಿ : ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿ ಭಾರಿ ಅವ್ಯವಹಾರ ಮತ್ತು ಕಳವು ನಡೆದಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟದ ಸಂಸದರು ಸಂಸತ್ ಭವನದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ವಿಷಯವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ಟಿಎಂಸಿಯ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಪ್ರಮುಖ ಸಂಸದರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಂಸತ್ತಿನ ಮಕರ ದ್ವಾರದ ಬಳಿ ಜಮಾಯಿಸಿದ ಸಂಸದರು, ಸಾಂಕೇತಿಕವಾಗಿ ದೇಣಿಗೆ ಪೆಟ್ಟಿಗೆಗಳನ್ನು ಮುಂಭಾಗದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಚಂದಾ ಚೋರ್, ಗಾದಿ ಬಿಡು’ ಘೋಷಣೆಪ್ರತಿಭಟನಾ ನಿರತ ಸಂಸದರು ಹಸ್ತಪ್ರತಿಗಳನ್ನು ಪ್ರದರ್ಶಿಸುತ್ತಾ, “ಚಂದಾ ಚೋರ್, ಗದ್ದಿ ಚೋಡ್” ಮತ್ತು “ಗೃಹ ಸಚಿವ ಅಮಿತ್ ಶಾ ಸದನಕ್ಕೆ ಬರಲಿ” ಎಂಬ ಕಡಕ್ ಘೋಷಣೆಗಳನ್ನು ಕೂಗಿದರು. ಭಕ್ತರು ಅತ್ಯಂತ ಶ್ರದ್ಧೆಯಿಂದ ಸಮರ್ಪಿಸಿದ ಹಣ ಮತ್ತು ಚಿನ್ನಾಭರಣಗಳ ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಈ ಹಗರಣದ ಕುರಿತು ತಕ್ಷಣವೇ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ಸಂಸತ್ತಿನಲ್ಲಿ ತುರ್ತು ಚರ್ಚೆಗೆ ಅವಕಾಶ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ಇದಕ್ಕೂ ಮುನ್ನ, ಜುಲೈ 31ರಂದು ಸಂಸತ್ತಿನ ಆವರಣದಲ್ಲಿ ವಿರೋಧ ಪಕ್ಷಗಳು ಈ ಹಗರಣವನ್ನು ಬಿಂಬಿಸುವ ವಿಭಿನ್ನ ಬೀದಿ ನಾಟಕ ಪ್ರದರ್ಶಿಸಿ ಗಮನ ಸೆಳೆದಿದ್ದವು. ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ಕಾವಿ ವಸ್ತ್ರ ಧರಿಸಿ ಅರ್ಚಕನಂತೆ ನಟಿಸಿದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ಸಂಸದರು ಭಕ್ತರಂತೆ ಸಾಲಿನಲ್ಲಿ ಬಂದು ದೇಣಿಗೆ ಪೆಟ್ಟಿಗೆಗೆ ಹಣ ಹಾಕುತ್ತಿದ್ದರು. ಈ ವೇಳೆ ಅರ್ಚಕನ ಪಾತ್ರದಲ್ಲಿದ್ದ ಪಪ್ಪು ಯಾದವ್ ಆ ಹಣವನ್ನು ಪೆಟ್ಟಿಗೆಗೆ ಹಾಕದೆ ರಹಸ್ಯವಾಗಿ ತನ್ನ ಜೇಬಿಗೆ ಇಳಿಸಿಕೊಳ್ಳುವ ಮೂಲಕ ದೇಣಿಗೆ ಕಳವನ್ನು ಸಾಂಕೇತಿಕವಾಗಿ ಪ್ರದರ್ಶಿಸಲಾಗಿತ್ತು.
ವಿರೋಧ ಪಕ್ಷಗಳ ಈ ವಿನೂತನ ನಾಟಕೀಯ ಪ್ರತಿಭಟನೆಗೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸನಾತನ ಧರ್ಮ ಮತ್ತು ಹಿಂದೂ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಬಿಜೆಪಿ ಸಂಸದರು ಕಿಡಿಕಾರಿದ್ದಾರೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂಸದರ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಮತ್ತೊಂದೆಡೆ, ನೀಟ್ (NEET) ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ರಾಮಮಂದಿರ ದೇಣಿಗೆ ಕಳವು ಎರಡೂ ಪ್ರಮುಖ ವಿಷಯಗಳ ಮುಖಾಂತರ ಸರ್ಕಾರವನ್ನು ಪೂರ್ಣ ಪ್ರಮಾಣದಲ್ಲಿ ತರಾಟೆಗೆ ತೆಗೆದುಕೊಳ್ಳಲು ‘ಇಂಡಿಯಾ’ ಒಕ್ಕೂಟ ನಿರ್ಧರಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಸಂಸತ್ತಿನ ಕಲಾಪಗಳು ಮತ್ತಷ್ಟು ಚಂಡಮಾರುತಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೇಸ್ : ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್ ದೋಷಮುಕ್ತ



















