ನವದೆಹಲಿ : ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಬಹುಚರ್ಚಿತ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ನ (WFI) ಮಾಜಿ ಮುಖ್ಯಸ್ಥ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ. ಬ್ರಿಜ್ ಭೂಷಣ್ ಅವರೊಂದಿಗೆ ಸಹ ಆರೋಪಿ ವಿನೋದ್ ತೋಮರ್ ಅವರ ಮೇಲಿನ ಆರೋಪಗಳನ್ನೂ ನ್ಯಾಯಾಲಯವು ವಜಾಗೊಳಿಸಿದೆ. ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಈ ಪ್ರಕರಣದ ಅಂತಿಮ ವಾದ-ಪ್ರತಿವಾದಗಳನ್ನು ಆಲಿಸಿದ್ದ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ತೀರ್ಪನ್ನು ಆಗಸ್ಟ್ 3ಕ್ಕೆ ಕಾಯ್ದಿರಿಸಿತ್ತು.
ನ್ಯಾಯಾಲಯದ ತೀರ್ಪಿನ ನಂತರ ಪ್ರತಿಕ್ರಿಯಿಸಿದ 69 ವರ್ಷದ ಬ್ರಿಜ್ ಭೂಷಣ್ ಸಿಂಗ್, ತಮ್ಮ ಮೇಲಿನ ಆರೋಪಗಳು ಸಾಬೀತಾದರೆ ನೇಣಿಗೇರಲು ಸಿದ್ಧ ಎಂದು ಆರೋಪಗಳು ಕೇಳಿಬಂದ ಮೊದಲ ದಿನವೇ ತಾವು ಹೇಳಿದ್ದಾಗಿ ನೆನಪಿಸಿಕೊಂಡರು.
“ಇಂದು ನ್ಯಾಯಾಲಯವು ನನ್ನನ್ನು ‘ಗೌರವಯುತವಾಗಿ’ ಖುಲಾಸೆಗೊಳಿಸಿದೆ, ಆಗಿಹೋಗಿದ್ದನ್ನು ಮರೆಯಬೇಕು” ಎಂದು ಅವರು ಹೇಳಿಕೆ ನೀಡಿದ್ದಾರೆ. ತೀರ್ಪು ಹೊರಬೀಳುತ್ತಿದ್ದಂತೆಯೇ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಹೂವುಗಳನ್ನು ಎರಚಿ, ‘ಜಿಂದಾಬಾದ್’ ಘೋಷಣೆಗಳನ್ನು ಕೂಗುವ ಮೂಲಕ ದೆಹಲಿಯ ಅವರ ನಿವಾಸದ ಬಳಿ ಅದ್ಧೂರಿ ಸಂಭ್ರಮಾಚರಣೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಬ್ಲ್ಯುಎಫ್ಐ ಪ್ರಸ್ತುತ ಅಧ್ಯಕ್ಷ ಹಾಗೂ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್, ಈ ತೀರ್ಪಿನಿಂದ ಪ್ರತಿಯೊಬ್ಬರಿಗೂ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ತಮ್ಮ ಅಧಿಕಾರಾವಧಿಯಲ್ಲಿ ಬ್ರಿಜ್ ಭೂಷಣ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಹಲವಾರು ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಯ ಬಳಿಕ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಸಮಗ್ರ ತನಿಖೆಯ ನಂತರ ದೆಹಲಿ ಪೊಲೀಸರು 2023ರ ಜೂನ್ 15ರಂದು 1500 ಪುಟಗಳ ಸುದೀರ್ಘ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2024ರ ಮೇ ತಿಂಗಳಲ್ಲಿ ನ್ಯಾಯಾಲಯವು ಸಿಂಗ್ ವಿರುದ್ಧ ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಲು ಆದೇಶಿಸಿತ್ತಾದರೂ, ದೂರುದಾರ ಆರು ಮಹಿಳಾ ಕುಸ್ತಿಪಟುಗಳ ಪೈಕಿ ಒಬ್ಬರು ದಾಖಲಿಸಿದ್ದ ದೂರಿನಿಂದ ಅವರನ್ನು ಆ ಸಂದರ್ಭದಲ್ಲಿಯೇ ಮುಕ್ತಗೊಳಿಸಿತ್ತು.
ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಹಾಗೂ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದರಿಂದ, ಬಿಜೆಪಿ ನಾಯಕತ್ವವು ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕೈಸರ್ಗಂಜ್ ಕ್ಷೇತ್ರದಿಂದ ಬ್ರಿಜ್ ಭೂಷಣ್ ಅವರಿಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿತ್ತು. ಬದಲಾಗಿ, ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರಿಗೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು ಹಾಗೂ ಕರಣ್ ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ : ಹೈಕೋರ್ಟ್ ಚಾಟಿ ಬೆನ್ನಲ್ಲೇ ಕೋರ್ಟ್ ಕ್ಯಾಂಟೀನ್ಗೆ FDA ಅಧಿಕಾರಿ ತುಕಾರಾಮ್ ಮುಂಡೆ ದಿಢೀರ್ ದಾಳಿ!



















