ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟೆನ್ ಡೋಷೇಟ್ ಹಾಗೂ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಭವಿಷ್ಯ ಕುರಿತು ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದೆ. ಭಾರತ ತಂಡದ ಸಹಾಯಕ ಸಿಬ್ಬಂದಿಯಲ್ಲಿನ ಬದಲಾವಣೆಗಳ ಕುರಿತು ಹಲವು ವರದಿಗಳು ಹರಿದಾಡುತ್ತಿದ್ದ ನಡುವೆಯೇ, ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಉಭಯ ಕೋಚ್ಗಳು ತಮ್ಮ ಒಪ್ಪಂದದ ಅವಧಿಯನ್ನು ಪೂರ್ಣಗೊಳಿಸಿದ್ದು, ಇನ್ನು ಮುಂದೆ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದೊಂದಿಗೆ ಮುಂದುವರೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಈ ಇಬ್ಬರನ್ನೂ ವಜಾಗೊಳಿಸಿಲ್ಲ, ಕೇವಲ ಅವರ ಒಪ್ಪಂದದ ಅವಧಿ ಮುಗಿದಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ರಿಯಾನ್ ಟೆನ್ ಡೋಷೇಟ್ ಹಾಗೂ ಟಿ. ದಿಲೀಪ್ ಒಪ್ಪಂದ ವಿಸ್ತರಣೆ ಇಲ್ಲ
ಮಂಗಳವಾರ (ಜುಲೈ 28) ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಸಹಾಯಕ ಕೋಚ್ ಆಗಿದ್ದ ರಿಯಾನ್ ಟೆನ್ ಡೋಷೇಟ್ ಅವರ ಎರಡು ವರ್ಷಗಳ ಒಪ್ಪಂದ ಜೂನ್ 10ಕ್ಕೆ ಅಂತ್ಯಗೊಂಡಿದ್ದರೆ, ಟಿ. ದಿಲೀಪ್ ಅವರಿಗೆ ನೀಡಿದ್ದ ಒಂದು ವರ್ಷದ ವಿಸ್ತರಣೆ ಜೂನ್ 8ರಂದೇ ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಭಾರತ ತಂಡದ ಇತ್ತೀಚಿನ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳು ಮುಗಿಯುವವರೆಗೂ ಇಬ್ಬರೂ ಕೋಚ್ಗಳು ತಂಡದಲ್ಲಿ ಮುಂದುವರಿದಿದ್ದರು. ಉಭಯ ಕೋಚ್ಗಳಿಗೆ ಒಪ್ಪಂದ ವಿಸ್ತರಣೆ ಮಾಡುವ ಯಾವುದೇ ಯೋಜನೆ ಮಂಡಳಿಯ ಮುಂದಿಲ್ಲ ಎಂಬುದನ್ನು ಸೈಕಿಯಾ ಸ್ಪಷ್ಟಪಡಿಸಿದ್ದು, ಅವರ ಭವಿಷ್ಯದ ಕುರಿತ ಎಲ್ಲ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. “ಒಪ್ಪಂದದ ಅವಧಿ ಮುಕ್ತಾಯಗೊಂಡಿರುವುದರಿಂದ ಇಲ್ಲಿ ರಾಜೀನಾಮೆ ಅಂಗೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೂ ಮುನ್ನ ಹೊಸ ಫೀಲ್ಡಿಂಗ್ ಕೋಚ್ ನೇಮಕ ಸಾಧ್ಯತೆ
ಹೊಸ ಫೀಲ್ಡಿಂಗ್ ಕೋಚ್ ನೇಮಕ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿರುವುದನ್ನು ಬಿಸಿಸಿಐ ಕಾರ್ಯದರ್ಶಿ ಖಚಿತಪಡಿಸಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. “ನಾವು ಈಗಾಗಲೇ ಅಂತಿಮಪಟ್ಟಿಯಲ್ಲಿರುವ ಎರಡು ಮೂರು ಹೆಸರುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಇನ್ನೊಂದೆರಡು ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಶ್ರೀಲಂಕಾ ಪ್ರವಾಸದ ವೇಳೆ ಭಾರತ ತಂಡವು ಹೊಸ ಫೀಲ್ಡಿಂಗ್ ಕೋಚ್ ಅನ್ನು ಹೊಂದಿರಲಿದೆ” ಎಂದು ಸೈಕಿಯಾ ತಿಳಿಸಿದ್ದಾರೆ.
ಬಿಸಿಸಿಐ ಆಫರ್ ತಿರಸ್ಕರಿಸಿದ ರಿಯಾನ್; ಟಿ. ದಿಲೀಪ್ಗೆ ಕೊಕ್
ರಿಯಾನ್ ಟೆನ್ ಡೋಷೇಟ್ ಮತ್ತು ಟಿ. ದಿಲೀಪ್ ಇಬ್ಬರೂ ಭಾರತ ತಂಡದ ಸಹಾಯಕ ಸಿಬ್ಬಂದಿಯಿಂದ ನಿರ್ಗಮಿಸುತ್ತಿದ್ದರೂ, ಇಬ್ಬರ ನಿರ್ಗಮನಕ್ಕೂ ಬೇರೆ ಬೇರೆ ಕಾರಣಗಳಿವೆ. ಗೌತಮ್ ಗಂಭೀರ್ ಅವರು ರಿಯಾನ್ ಅವರನ್ನು ಕೋಚಿಂಗ್ ಬಳಗದಲ್ಲಿ ಸೇರಿಸಿಕೊಳ್ಳಲು ಬಯಸಿದಾಗ, ರಿಯಾನ್ ತಮಗೆ ಫೀಲ್ಡಿಂಗ್ ಕೋಚ್ ಹುದ್ದೆ ಸಿಗಲಿದೆ ಎಂದು ನಿರೀಕ್ಷಿಸಿದ್ದರು, ಆದರೆ ಅವರಿಗೆ ಬೇರೆಯದೇ ಜವಾಬ್ದಾರಿ ನೀಡಲಾಗಿತ್ತು.
ಇಂಗ್ಲೆಂಡ್ ಪ್ರವಾಸದ ವೇಳೆ ರಿಯಾನ್ ಅವರು ತಂಡದಿಂದ ನಿರ್ಗಮಿಸುವ ತಮ್ಮ ಆಸೆಯನ್ನು ಬಿಸಿಸಿಐಗೆ ತಿಳಿಸಿದ್ದರು. ವರದಿಗಳ ಪ್ರಕಾರ, ಬಿಸಿಸಿಐ ಅವರಿಗೆ 2027ರವರೆಗೆ ಹೊಸ ಒಪ್ಪಂದದ ಆಫರ್ ನೀಡಿತ್ತು, ಆದರೆ ನಿರಂತರ ಅಂತರರಾಷ್ಟ್ರೀಯ ಪ್ರವಾಸಗಳಿಂದ ದೂರವಿದ್ದು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ರಿಯಾನ್ ಅದನ್ನು ತಿರಸ್ಕರಿಸಿದರು ಎನ್ನಲಾಗಿದೆ. ಮತ್ತೊಂದೆಡೆ, ಇತ್ತೀಚಿನ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಫೀಲ್ಡಿಂಗ್ ಪ್ರದರ್ಶನ ತೀವ್ರ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಟಿ. ದಿಲೀಪ್ ಅವರ ಒಪ್ಪಂದವನ್ನು ನವೀಕರಿಸದಿರಲು ಬಿಸಿಸಿಐ ತೀರ್ಮಾನಿಸಿದೆ.
ಇದನ್ನೂ ಓದಿ : “ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” : ‘ಸನ್ರೈಸರ್ಸ್ ಲೀಡ್ಸ್’ ಖರೀದಿ ಬಳಿಕ ಕಾವ್ಯಾ ವಿಶ್ವಾಸದ ನುಡಿ!



















