ನವದೆಹಲಿ : ಭಾರತ ಮತ್ತು ಅಮೆರಿಕ ನಡುವೆ ಇನ್ನೂ ಅಂತಿಮಗೊಳ್ಳದ ವ್ಯಾಪಾರ ಒಪ್ಪಂದದ (Trade Deal) ವಿರುದ್ಧ ದೇಶದ ರೈತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೃಹತ್ ಹೋರಾಟಕ್ಕೆ ಕರೆ ನೀಡಿದೆ. ‘ದೇಶ್ ಬಚಾವೋ ಮೋರ್ಚಾ’ ಹಾಗೂ ‘ಕಿಸಾನ್ ಮಜ್ದೂರ್ ಮೋರ್ಚಾ’ ಬ್ಯಾನರ್ಗಳ ಅಡಿಯಲ್ಲಿ ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಸಾವಿರಾರು ರೈತರು ದೆಹಲಿಯ ಕಿಸಾನ್ ಘಾಟ್ ಕಡೆಗೆ ‘ಮಹಾಪಂಚಾಯತ್’ ನಡೆಸಲು ಧಾವಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹರ್ಯಾಣ ಪೊಲೀಸರು ಶಂಭು, ಖಾನೌರಿ ಹಾಗೂ ಬಸ್ತಾರಾ ಗಡಿಗಳಲ್ಲಿ ಭಾರಿ ಭದ್ರತೆ ಒದಗಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಸಹಿ ಮಾಡದ ಒಪ್ಪಂದಕ್ಕೆ ರೈತರ ವಿರೋಧವೇಕೆ?
ಒಪ್ಪಂದವು ಇನ್ನೂ ಮಾತುಕತೆಯ ಹಂತದಲ್ಲಿದ್ದರೂ ರೈತರು ಬೀದಿಗಿಳಿಯಲು ಪ್ರಮುಖ ಕಾರಣ ಆತಂಕ ಮತ್ತು ಸರ್ಕಾರದ ಮೇಲಿನ ಅಪನಂಬಿಕೆ. ಅಮೆರಿಕದ ಕೃಷಿ ವಲಯಕ್ಕೆ ಅಲ್ಲಿನ ಸರ್ಕಾರ ಅಪಾರ ಪ್ರಮಾಣದ ಸಬ್ಸಿಡಿ ನೀಡುತ್ತದೆ. ಒಂದು ವೇಳೆ ಈ ಒಪ್ಪಂದಕ್ಕೆ ಅಂತಿಮ ಮೊಹರು ಬಿದ್ದರೆ, ಅಮೆರಿಕದಿಂದ ಅಗ್ಗದ ದರದ ಧಾನ್ಯಗಳು, ಹಾಲಿನ ಉತ್ಪನ್ನಗಳು ಹಾಗೂ ಕೃಷಿ ಸರಕುಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದರಿಂದಾಗಿ ಸ್ಥಳೀಯ ಬೆಳೆಗಳ ಬೆಲೆ ಕುಸಿದು, ದೇಶದ ಸಣ್ಣ ರೈತರು, ಕೃಷಿ ಕಾರ್ಮಿಕರು ಹಾಗೂ ಹಾಲಿನ ಉತ್ಪಾದಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬುದು ರೈತ ಸಂಘಟನೆಗಳ ಪ್ರಮುಖ ಆತಂಕವಾಗಿದೆ. ಒಮ್ಮೆ ಒಪ್ಪಂದಕ್ಕೆ ಸಹಿ ಬಿದ್ದ ನಂತರ ಮಾರುಕಟ್ಟೆ ಮುಕ್ತವಾದರೆ ಹಿಂಪಡೆಯುವುದು ಕಷ್ಟ. ಹೀಗಾಗಿ ಮಾತುಕತೆ ಹಂತದಲ್ಲೇ ತಡೆಹಿಡಿಯುವುದು ಅಗತ್ಯ ಎಂದು ರೈತರು ವಾದಿಸುತ್ತಿದ್ದಾರೆ.
ಕೆಂಪು ಗೆರೆ ದಾಟುವುದಿಲ್ಲ ಎಂದ ಕೇಂದ್ರ ಸರ್ಕಾರ
ಮತ್ತೊಂದೆಡೆ, ರೈತರ ಆತಂಕಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ದೇಶದ ಕೃಷಿ ಹಿತಾಸಕ್ತಿಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಾತನಾಡಿ, “ಎರಡೂ ದೇಶಗಳ ಉದ್ಯಮಿಗಳು, ರೈತರು ಮತ್ತು ಗ್ರಾಹಕರಿಗೆ ಸಮಾನ ಪ್ರಯೋಜನ ಸಿಗುವಂತಹ ಸಮತೋಲಿತ ಒಪ್ಪಂದಕ್ಕೆ ಮಾತ್ರ ಭಾರತ ಸಮ್ಮತಿಸಲಿದೆ. ಕೃಷಿ ರಂಗಕ್ಕೆ ಧಕ್ಕೆಯಾಗುವ ಯಾವುದೇ ಷರತ್ತುಗಳಿಗೆ ನಾವು ಒಪ್ಪಿಲ್ಲ,” ಎಂದು ತಿಳಿಸಿದ್ದಾರೆ. ಮಾತುಕತೆಗಳಲ್ಲಿ ಭಾರತೀಯ ಕೃಷಿ ವಲಯವನ್ನು ಸುರಕ್ಷಿತವಾಗಿಡಲು ಕಟ್ಟುನಿಟ್ಟಿನ ನಿಯಮಗಳನ್ನು ಕಾಯ್ದುಕೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ವರದಿಗಳ ಪ್ರಕಾರ, ಸುಂಕ (Tariff) ವಿನಾಯಿತಿ ಮತ್ತು ಕೃಷಿ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತ ಇಟ್ಟಿರುವ ನಿಲುವುಗಳಿಗೆ ಅಮೆರಿಕದಿಂದ ಸೂಕ್ತ ಭರವಸೆ ಸಿಗದ ಕಾರಣ ಈವರೆಗೂ ಮಧ್ಯಂತರ ಒಪ್ಪಂದಕ್ಕೂ ಸಮ್ಮತಿ ಸಿಕ್ಕಿಲ್ಲ. ಚೀನಾದಂತಹ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ನೀಡುವ ಸುಂಕದ ರಕ್ಷಣೆ ಮತ್ತು ಭವಿಷ್ಯದಲ್ಲಿ ಹೊಸ ಸುಂಕಗಳನ್ನು ವಿಧಿಸುವುದಿಲ್ಲ ಎಂಬ ಭರವಸೆಯನ್ನು ಭಾರತ ಕೋರಿದೆ. ರೈತರ ಹಿತ ಕಾಯುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಸರಿಯಾದ ಸಮಯ ಮತ್ತು ಸನ್ನಿವೇಶ ಒದಗಿಬಂದಾಗ ಮಾತ್ರ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಮತ್ತೆ ಜಂತರ್ಮಂತರ್ಗೆ ಸಿಜೆಪಿ ಲಗ್ಗೆ : ಪೋಲಿಸ್ ಹೈಅಲರ್ಟ್ ನಡುವೆಯೂ ಮುಂದುವರಿದ ಪ್ರತಿಭಟನೆ!



















