ಪುಣೆ: ಪುಣೆಯ ಯುವ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಆರೋಪಿ ಸಿಯಾ ಗೋಯಲ್ ಮೊಬೈಲ್ನಿಂದ ಡಿಲೀಟ್ ಮಾಡಲಾಗಿದ್ದ ಸ್ನಾಪ್ಚಾಟ್ (Snapchat) ಚಾಟ್ಗಳನ್ನು ಪೊಲೀಸರು ಯಶಸ್ವಿಯಾಗಿ ಮರುಪಡೆದಿದ್ದಾರೆ. ಈ ಚಾಟ್ಗಳಲ್ಲಿ ಸಿಯಾ ತನ್ನ ಸ್ನೇಹಿತರೊಬ್ಬರ ಜೊತೆ ನಡೆಸಿರುವ ಸಂಭಾಷಣೆ ಕೊಲೆಯ ಹಿಂದಿನ ಸಂಚಿನ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಪೊಲೀಸರು ರಿಕವರ್ ಮಾಡಿರುವ ಚಾಟ್ಗಳ ಪ್ರಕಾರ, ಸಿಯಾ ಗೋಯಲ್ ತನ್ನ ಸ್ನೇಹಿತೆಯೊಬ್ಬಳಿಗೆ ಮದುವೆ ಟಿಕೆಟ್ ಬುಕ್ ಮಾಡುವ ನೆಪದಲ್ಲಿ ಗುರುತಿನ ಚೀಟಿಯ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದಾಳೆ. ಅದರಲ್ಲಿ ಸಿಯಾ ಬರೆದಿರುವ ಆಘಾತಕಾರಿ ಸಂದೇಶ ಹೀಗಿದೆ: “ಆಧಾರ್ ಕಾರ್ಡ್ನ ಮುಂಭಾಗ ಮತ್ತು ಹಿಂಭಾಗದ ಫೋಟೋವನ್ನು ಕಳಿಸು. ಮದುವೆ ಟಿಕೆಟ್ ಬುಕ್ ಮಾಡಲು… ಅಂದಹಾಗೆ ಈ ಮದುವೆ ಎಂದಿಗೂ ನಡೆಯುವುದೇ ಇಲ್ಲ, ಆದರೂ ಪರವಾಗಿಲ್ಲ ಫೋಟೋ ಕಳಿಸು” ಎಂದು ಬರೆದುಕೊಂಡಿದ್ದಾಳೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಆಕೆಯ ಸ್ನೇಹಿತೆ, ಈಗಾಗಲೇ ವಾಟ್ಸಾಪ್ನಲ್ಲಿ ದಾಖಲೆಯನ್ನು ಹಂಚಿಕೊಂಡಿರುವುದಾಗಿ ತಿಳಿಸಿದ್ದಾಳೆ. ಕೊಲೆ ನಡೆಯುವ ಮುನ್ನ ಅಥವಾ ನಂತರದ ಅವಧಿಯಲ್ಲಿ ಈ ರೀತಿಯ ನಿಗೂಢ ಸಂದೇಶ ರವಾನೆಯಾಗಿರುವುದು ಪೊಲೀಸರ ಸಂಶಯವನ್ನು ಬಲಪಡಿಸಿದೆ.
ಕೋಡ್ ವರ್ಡ್ಸ್, ಎಮೋಜಿಗಳ ಬಳಕೆ
ಪುಣೆ ಪೊಲೀಸರು ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ಪ್ರಕಾರ, ಆರೋಪಿಗಳ ಫೋನ್ಗಳಿಂದ ಅಪಾರ ಪ್ರಮಾಣದ ಡಿಲೀಟ್ ಮಾಡಲಾದ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಕೇವಲ ಸಾಮಾನ್ಯ ಚಾಟ್ಗಳಲ್ಲದೆ, ಸಾಂಕೇತಿಕ ಭಾಷೆ (ಕೋಡ್ ವರ್ಡ್ಸ್), ಅಡ್ಡಹೆಸರುಗಳು ಮತ್ತು ವಿಚಿತ್ರ ಎಮೋಜಿಗಳನ್ನು ಬಳಸಿ ನಡೆಸಿರುವ ಸಂಭಾಷಣೆಗಳೂ ಸೇರಿವೆ. ಕೊಲೆಯ ಸಂಚಿನಲ್ಲಿ ಮೂರನೇ ವ್ಯಕ್ತಿಯ ಭಾಗೀದಾರಿಕೆ ಇರಬಹುದೇ ಎಂಬ ನಿಟ್ಟಿನಲ್ಲಿ ಈ ಕೋಡೆಡ್ ಸಂದೇಶಗಳನ್ನು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ, ಸಿಯಾ ಗೋಯಲ್ ಬಚ್ಚಿಟ್ಟಿದ್ದಾಳೆ ಎನ್ನಲಾದ ಎರಡನೇ ಮೊಬೈಲ್ ಫೋನ್ ಕೂಡ ಪತ್ತೆಯಾಗಿದ್ದು, ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ.
ಭೀಡ್ ಜಿಲ್ಲೆಯ ಯುವಕನ ವಿಚಾರಣೆ
ಕೊಲೆಯ ಯೋಜನೆಗೆ ಸಂಬಂಧಿಸಿದಂತೆ ಸಿಯಾ ಗೋಯಲ್ ಮತ್ತು ಸಹ-ಆರೋಪಿ ಚೇತನ್ ಚೌಧರಿ ಅವರು ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಯುವಕನೊಬ್ಬನ ಜೊತೆ ಮಾಹಿತಿ ಹಂಚಿಕೊಂಡಿದ್ದರು ಎಂಬ ಹೊಸ ವಿಷಯವೂ ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆ ಯುವಕ, ತಾನು ಯಾವುದೇ ಸಂಚಿನಲ್ಲಿ ಭಾಗಿಯಾಗಿಲ್ಲ, ಬದಲಿಗೆ ಇಂತಹ ಘೋರ ಕೃತ್ಯ ಎಸಗದಂತೆ ಅವರಿಗೆ ಬುದ್ಧಿವಾದ ಹೇಳಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಪ್ರಸ್ತುತ, ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರೂ ‘ಲೈ ಡಿಟೆಕ್ಟರ್'(ಸುಳ್ಳು ಪತ್ತೆ ಪರೀಕ್ಷೆ) ಅಥವಾ ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸರು ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.



















