ಆಗ್ರಾ: ಸಿನಿಮೀಯ ಶೈಲಿಯ ಭೀಕರ ಕೊಲೆ ಪ್ರಕರಣವೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. 45 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ 44 ವರ್ಷದ ಸುರೇಂದ್ರ ಕುಮಾರ್ ಶರ್ಮಾ ಎಂಬವರ ಮೃತದೇಹ, ಅವರದ್ದೇ ಮನೆಯ ಬಾತ್ ರೂಂ ನೆಲದ ಅಡಿಯಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿಯನ್ನು ಕೊಲೆ ಮಾಡಿ, ಆ ಶವದ ಮೇಲೆ ಮಣ್ಣು ಹಾಕಿ, ಯಾರಿಗೂ ಸಂಶಯ ಬಾರದಂತೆ ಹೊಸದಾಗಿ ಟೈಲ್ಸ್ ಹಾಕಿಸಿ, ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ಪತ್ನಿ ರೂಬಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 18ರಿಂದ ಸುರೇಂದ್ರ ಕುಮಾರ್ ನಾಪತ್ತೆಯಾಗಿದ್ದರು. ಪತ್ನಿ ರೂಬಿ ತನ್ನ ಪತಿ ಎಲ್ಲೋ ಹೋಗಿದ್ದಾರೆ, ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಸಂಬಂಧಿಕರು ಹಾಗೂ ನೆರೆಹೊರೆಯವರಿಗೆ ಸುಳ್ಳು ಹೇಳಿ ನಂಬಿಸಿದ್ದಳು. ಮೇ 26ರಂದು ಆಕೆಯೇ ಪೊಲೀಸ್ ಠಾಣೆಗೆ ತೆರಳಿ ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ಕೂಡ ದಾಖಲಿಸಿದ್ದಳು. ಕುಟುಂಬಸ್ಥರು ಹಲವು ವಾರಗಳ ಕಾಲ ಎಲ್ಲಾ ಕಡೆ ಹುಡುಕಾಡಿದರೂ ಸುರೇಂದ್ರ ಅವರ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಒಳಗೊಳಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ರೂಬಿ ನೀಡುತ್ತಿದ್ದ ಹೇಳಿಕೆಗಳಲ್ಲಿ ಸಾಕಷ್ಟು ಗೊಂದಲ ಮತ್ತು ಅನುಮಾನಗಳು ಮೂಡತೊಡಗಿದ್ದವು.
ಬಾತ್ ರೂಂನ ಹೊಸ ಟೈಲ್ಸ್ ತಂದಿಟ್ಟ ಆಪತ್ತು
ಹಳೆಯ ಪ್ರಕರಣವೊಂದರ ಪರಿಶೀಲನೆಗಾಗಿ ಶುಕ್ರವಾರ ಪೊಲೀಸರು ಹಠಾತ್ತನೆ ಸುರೇಂದ್ರ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ರೂಬಿಯ ವರ್ತನೆ ಅತ್ಯಂತ ಶಂಕಾಸ್ಪದವಾಗಿತ್ತು. ಇದೇ ಸಮಯದಲ್ಲಿ ಸುರೇಂದ್ರ ಅವರ ಸಹೋದರ ನೀಡಿದ ಕೆಲವು ಪ್ರಮುಖ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇಡೀ ಮನೆಯನ್ನು ಜಾಲಾಡಲು ಆರಂಭಿಸಿದರು. ಈ ತಪಾಸಣೆ ವೇಳೆ ಬಾತ್ ರೂಂಗೆ ಹೋಗಿದ್ದ ಪೊಲೀಸರಿಗೆ ಅಲ್ಲಿನ ನೆಲಕ್ಕೆ ಇತ್ತೀಚೆಗಷ್ಟೇ ಹೊಸ ಪ್ಲಾಸ್ಟರ್ ಮತ್ತು ಟೈಲ್ಸ್ ಹಾಕಿರುವುದು ಕಂಡುಬಂದಿತು. ನೆಲದ ಅಡಿಯಲ್ಲಿ ಏನೋ ಮುಚ್ಚಿಡಲಾಗಿದೆ ಎಂಬ ಬಲವಾದ ಅನುಮಾನದ ಮೇಲೆ ಪೊಲೀಸರು ತಕ್ಷಣವೇ ಆ ಟೈಲ್ಸ್ ಒಡೆದು ಅಗೆಯಲು ಆದೇಶಿಸಿದರು.
ಕೆಲವೇ ಕ್ಷಣಗಳಲ್ಲಿ ಅಲ್ಲಿ ಸುರೇಂದ್ರ ಅವರ ಕೊಳೆತು ನಾರುತ್ತಿದ್ದ ಮೃತದೇಹ ಪತ್ತೆಯಾಗಿದ್ದು, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ವಿಷಯ ತಿಳಿಯುತ್ತಿದ್ದಂತೆ ಮನೆಯ ಹೊರಗೆ ನೂರಾರು ಜನ ಜಮಾಯಿಸಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಕೊಲೆ ಮಾಡಿದ ತಕ್ಷಣವೇ ಶವವನ್ನು ಬಾತ್ ರೂಂನಲ್ಲಿ ಹೂತುಹಾಕಿ, ಸಾಕ್ಷ್ಯ ನಾಶಪಡಿಸಲು ಮೇಲಿಂದ ಸಿಮೆಂಟ್ ಪ್ಲಾಸ್ಟರ್ ಮಾಡಿ ಹೊಸ ಟೈಲ್ಸ್ ಹಾಕಲಾಗಿತ್ತು.
ಕೊಲೆ ಒಪ್ಪಿಕೊಂಡ ಪತ್ನಿ: ತನಿಖೆ ಚುರುಕು
ಪೊಲೀಸರ ತೀವ್ರ ವಿಚಾರಣೆಯ ಬಳಿಕ ಆರೋಪಿ ರೂಬಿ ತನ್ನ ಪತಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಘಟನೆ ನಡೆಯುವ ಮುನ್ನವೇ ಬಾತ್ ರೂಂ ನವೀಕರಣ ಕಾಮಗಾರಿಗಾಗಿ ಆಕೆ ಮೇಸ್ತ್ರಿ ಹಾಗೂ ಕಾರ್ಮಿಕರನ್ನು ಬುಕ್ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಸಹೋದರ ಅನಿಲ್ ಶರ್ಮಾ ಮಾತನಾಡಿ, ಸುರೇಂದ್ರ ಅವರಿಗೆ ಅತಿಯಾದ ಕುಡಿತದ ಚಟವಿತ್ತು, ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿಧಿವಿಜ್ಞಾನ ತಂಡವು ಮನೆಯಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ರೂಬಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯ ಹಿಂದಿನ ಅಸಲಿ ಕಾರಣ ಹಾಗೂ ಈ ಭೀಕರ ಸಂಚಿನಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ ಎಂದು ಹರಿಪರ್ವತ್ ವಲಯದ ಎಸಿಪಿ ಹೇಮಂತ್ ಪಟೇಲ್ ತಿಳಿಸಿದ್ದಾರೆ.



















