ಬೆಲ್ಫಾಸ್ಟ್ : ಇಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ತೀರಾ ದುರ್ಬಲ ತಂಡವಾದ ಐರ್ಲೆಂಡ್ ಎದುರು 34 ರನ್ಗಳ ಅಚ್ಚರಿಯ ಸೋಲು ಅನುಭವಿಸಿದ ಬಳಿಕ, ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನ ತೀವ್ರ ಟೀಕೆಗೆ ಗುರಿಯಾಗಿದೆ.
ಜುಲೈ 2024 ರಲ್ಲಿ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ತಂಡವು ಕೆಲವು ಐತಿಹಾಸಿಕ ಸಾಧನೆಗಳನ್ನು ಮಾಡಿದ್ದರೂ, ಅಷ್ಟೇ ಸಮಾನವಾಗಿ ಸಾಕಷ್ಟು ಕಳಪೆ ಹಾಗೂ ಅನಪೇಕ್ಷಿತ ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿದೆ. ಮಾಜಿ ಆರಂಭಿಕ ಆಟಗಾರ ಗಂಭೀರ್ ಅವರ ಕಾಲಘಟ್ಟದಲ್ಲಿ ಭಾರತವು ಹಲವು ಸ್ಮರಣೀಯ ಗೆಲುವುಗಳನ್ನು ಕಂಡಿದ್ದರೂ, ಈ ಅವಧಿಯಲ್ಲಿ ಮುರಿದುಬಿದ್ದ ದಶಕಗಳ ಕಾಲದ ಭವ್ಯ ದಾಖಲೆಗಳು ಹಾಗೂ ಸೃಷ್ಟಿಯಾದ ನಕಾರಾತ್ಮಕ ಮೈಲಿಗಲ್ಲುಗಳು ಕ್ರಿಕೆಟ್ ಪ್ರೇಮಿಗಳನ್ನು ಚಿಂತೆಗೀಡುಮಾಡಿವೆ.
ಊಹಿಸಲಾಗದ ಸೋಲುಗಳು
ಸ್ವದೇಶದಲ್ಲಿ ಹಾಗೂ ವಿದೇಶಿ ನೆಲದಲ್ಲಿ ಘಟಾನುಘಟಿ ತಂಡಗಳನ್ನು ಮಣಿಸುತ್ತಿದ್ದ ಭಾರತ, ಗಂಭೀರ್ ಅವರ ಪ್ರವೇಶದ ನಂತರ ಕೆಲವು ಊಹಿಸಲಾಗದ ಸೋಲುಗಳನ್ನು ಕಂಡಿದೆ. ಐರ್ಲೆಂಡ್ ವಿರುದ್ಧದ ಈ ಇತ್ತೀಚಿನ ಪಂದ್ಯದಲ್ಲಿ ಭಾರತವು ಸುಲಭ ಗೆಲುವಿನ ಫೇವರಿಟ್ ಆಗಿ ಕಣಕ್ಕಿಳಿದಿತ್ತಾದರೂ ಕೇವಲ 148 ರನ್ಗಳಿಗೆ ಆಲೌಟ್ ಆಗುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆತಿಥೇಯರ ವಿರುದ್ಧ ಮೊದಲ ಬಾರಿಗೆ ತಲೆಬಾಗಿತು.
ಆದರೆ, ಇದು ಕೇವಲ ಒಂದು ಪಂದ್ಯದ ವೈಫಲ್ಯವಲ್ಲ; 2024 ರ ಶ್ರೀಲಂಕಾ ಪ್ರವಾಸದಿಂದಲೇ ಈ ಕಳಪೆ ಪ್ರದರ್ಶನದ ಸರಣಿ ಆರಂಭವಾಗಿದೆ. ಲಂಕಾ ನೆಲದಲ್ಲಿ ಬರೋಬ್ಬರಿ 27 ವರ್ಷಗಳ ಬಳಿಕ ದ್ವಿಪಕ್ಷೀಯ ಏಕದಿನ ಸರಣಿ ಸೋತ ಭಾರತ, 45 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷವೊಂದರಲ್ಲಿ ಏಕದಿನ ಪಂದ್ಯದಲ್ಲಿ ಒಂದೂ ಗೆಲುವು ದಾಖಲಿಸದೇ ಮುಖಭಂಗ ಅನುಭವಿಸಿತು.
\ಟೆಸ್ಟ್ ಕ್ರಿಕೆಟ್ ನಲ್ಲಂತೂ ಟೀಮ್ ಇಂಡಿಯಾದ ಪ್ರದರ್ಶನ ಮಂಕಾಗಿದೆ. ದಶಕಗಳಿಂದ ಸ್ವದೇಶದಲ್ಲಿ ಅಜೇಯ ಕೋಟೆಯಂತೆ ಮೆರೆಯುತ್ತಿದ್ದ ತಂಡ, ನ್ಯೂಜಿಲೆಂಡ್ ಎದುರು 36 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿತು ಹಾಗೂ ಇತಿಹಾಸದಲ್ಲೇ ಮೊದಲ ಬಾರಿಗೆ ಕಿವೀಸ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕೈಚೆಲ್ಲಿತು. 12 ವರ್ಷಗಳ ನಂತರ ಸತತವಾಗಿ ಎರಡು ಪಂದ್ಯಗಳನ್ನು ಸೋತಿದ್ದಲ್ಲದೆ, 47 ವರ್ಷಗಳ ಬಳಿಕ ತವರಿನಲ್ಲಿ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಪರಾಭವಗೊಂಡ ಅಪಕೀರ್ತಿಗೂ ಗುರಿಯಾಯಿತು.
ಇದರ ಜೊತೆಗೆ, ದಕ್ಷಿಣ ಆಫ್ರಿಕಾ ವಿರುದ್ಧ 15 ವರ್ಷಗಳ ಬಳಿಕ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 10 ವರ್ಷಗಳ ಬಳಿಕ ಕಳೆದುಕೊಂಡಿದ್ದು ಗಂಭೀರ್ ಅವರ ತರಬೇತಿಯ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ. ತವರಿನಲ್ಲಿ 200 ಕ್ಕಿಂತ ಕಡಿಮೆ ಮೊತ್ತವನ್ನು ಬೆನ್ನಟ್ಟುವಲ್ಲಿ ಮೊದಲ ಬಾರಿಗೆ ಎಡವಿದ್ದು, 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದು ಹೀಗೆ ಸಾಲು ಸಾಲು ಕಳಪೆ ದಾಖಲೆಗಳು ನಿರ್ಮಾಣವಾಗಿವೆ.
ಸಾಧನೆಗಳೂ ಇವೆ
ಅದೇನೇ ಇದ್ದರೂ, ವಿಮರ್ಶೆಗಳ ನಡುವೆ ಗಂಭೀರ್ ಅವರ ಕೆಲವು ಅಮೋಘ ಸಾಧನೆಗಳನ್ನು ಮರೆಯುವಂತಿಲ್ಲ. ರಾಹುಲ್ ದ್ರಾವಿಡ್ ಅವರ ನಿರ್ಗಮನದ ನಂತರ ತಂಡದ ಚುಕ್ಕಾಣಿ ಹಿಡಿದ ಗಂಭೀರ್, ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಭಾರತಕ್ಕೆ ಆಕ್ರಮಣಕಾರಿ ವಿಧಾನವನ್ನು ಪರಿಚಯಿಸಿದರು. ಈ ತಂತ್ರದ ಪರಿಣಾಮವಾಗಿ ಭಾರತವು 2025 ರ ಏಷ್ಯಾ ಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಎಲ್ಲಕ್ಕಿಂತ ಮಿಗಿಲಾಗಿ 2026 ರಲ್ಲಿ ನ್ಯೂಜಿಲೆಂಡ್ ತಂಡವನ್ನು ಫೈನಲ್ನಲ್ಲಿ 96 ರನ್ಗಳಿಂದ ಬಗ್ಗುಬಡಿಯುವ ಮೂಲಕ ಐಸಿಸಿ ಟಿ-20 ವಿಶ್ವಕಪ್ ಗೆದ್ದುಕೊಂಡಿತು. ಆಟಗಾರನಾಗಿ ಮತ್ತು ಕೋಚ್ ಆಗಿ ಪುರುಷರ ಟಿ-20 ವಿಶ್ವಕಪ್ ಗೆದ್ದ ಇತಿಹಾಸದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಗಂಭೀರ್ ಪಾತ್ರರಾದರು. ಈ ಭಾರಿ ಯಶಸ್ಸುಗಳು ಅವರನ್ನು ಯಶಸ್ವಿ ಕೋಚ್ಗಳಲ್ಲಿ ಒಬ್ಬರನ್ನಾಗಿ ನಿಲ್ಲಿಸುತ್ತವೆಯಾದರೂ, ಈ ಬೇಡದ ಕಳಪೆ ದಾಖಲೆಗಳ ಪಟ್ಟಿ ಗಂಭೀರ್ ಅವರ ಕಾರ್ಯವೈಖರಿಯ ಮೇಲೆ ಕಪ್ಪುಚುಕ್ಕೆಯಾಗಿ ಉಳಿಯಲಿದೆ.
ಇದನ್ನೂ ಓದಿ : ‘ಐರ್ಲೆಂಡ್ ಗೆಲುವಿಗೆ ಪೂರ್ಣ ಅರ್ಹ’ : ಬೆಲ್ಫಾಸ್ಟ್ ಸೋಲಿನ ಬಳಿಕ ಅಭಿಷೇಕ್ ಶರ್ಮಾ ನೇರ ಮಾತು



















