ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಜಿದ್ದಾಜಿದ್ದಿನ ರಾಜಕೀಯ ರಣಕದನಕ್ಕೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಎಲ್ಲಾ 5 ಸ್ಥಾನಗಳನ್ನೂ ಗೆದ್ದು ಕ್ಲೀನ್ ಸ್ವೀಪ್ ಸಾಧಿಸಿದೆ. ಈ ಗೆಲುವಿನ ಹಿಂದೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಕ್ಷ್ಮ ತಂತ್ರಗಾರಿಕೆ ಮತ್ತು ಕಟ್ಟುನಿಟ್ಟಿನ ಚುನಾವಣಾ ನಿರ್ವಹಣೆ ಪ್ರಮುಖ ಪಾತ್ರ ವಹಿಸಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ಈ ಚುನಾವಣೆಯನ್ನು ಸಿಎಂ ಡಿಕೆಶಿ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದರು. ಅಭ್ಯರ್ಥಿಗಳ ಗೆಲುವು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಶಾಸಕರನ್ನೂ ವೈಯಕ್ತಿಕವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಯಾವುದೇ ಅಡ್ಡಮತದಾನಕ್ಕೆ ಅವಕಾಶ ನೀಡದಂತೆ ವಿಶೇಷ ಯೋಜನೆ ರೂಪಿಸಲಾಗಿತ್ತು.
ಮತದಾನದ ಮುನ್ನ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ನಲ್ಲಿ ಉಳಿಸಿ ಪಕ್ಷದ ಏಕತೆಯನ್ನು ಕಾಪಾಡಿಕೊಳ್ಳಲಾಯಿತು. ಶಾಸಕರು ಬೇರೆ ಪಕ್ಷಗಳ ಸಂಪರ್ಕಕ್ಕೆ ಹೋಗದಂತೆ ಹಾಗೂ ಮತದಾನದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೊಳಿಸಲಾಯಿತು. ಮತದಾನ ಪ್ರಕ್ರಿಯೆ ಯಶಸ್ವಿಯಾಗಲು ಪ್ರತಿಯೊಬ್ಬ ಶಾಸಕರಿಗೂ ವಿಶೇಷ ತರಬೇತಿ ನೀಡಲಾಯಿತು. ಅಭ್ಯರ್ಥಿಗಳಿಗೆ ನಿಗದಿತ ರೀತಿಯಲ್ಲಿ ಮತ ಚಲಾಯಿಸಲು ಸೂಚನೆ ನೀಡಲಾಗಿದ್ದು, ಇದಕ್ಕಾಗಿ ಐದು ಪ್ರತ್ಯೇಕ ತಂಡಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿತ್ತು.
ಚುನಾವಣಾ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು ಹೈಟೆಕ್ ಕಣ್ಗಾವಲು ವ್ಯವಸ್ಥೆಯನ್ನೂ ಜಾರಿಗೆ ತರಲಾಗಿತ್ತು. ಪ್ರತಿ 30 ಶಾಸಕರಿಗೆ ಒಬ್ಬ ಹಿರಿಯ ಶಾಸಕರನ್ನು ಉಸ್ತುವಾರಿಯಾಗಿ ನೇಮಿಸಿ ನಿರಂತರ ಮೇಲ್ವಿಚಾರಣೆ ನಡೆಸಲಾಯಿತು. ಇದರಿಂದ ಪಕ್ಷದ ಮತಗಳು ಚದುರದಂತೆ ನೋಡಿಕೊಳ್ಳಲಾಯಿತು. ವಿಧಾನಸೌಧಕ್ಕೆ ಮತದಾನಕ್ಕೆ ಬರುವ ಸಂದರ್ಭದಲ್ಲಿಯೂ ವಿಶೇಷ ತಂತ್ರ ಅನುಸರಿಸಲಾಯಿತು. ಶಾಸಕರಿಗಾಗಿ ಐದು ಪ್ರತ್ಯೇಕ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಸಮನ್ವಯದೊಂದಿಗೆ ಮತದಾನ ಕೇಂದ್ರಕ್ಕೆ ತಲುಪುವಂತೆ ಕ್ರಮ ಕೈಗೊಳ್ಳಲಾಯಿತು.
ಕಾಂಗ್ರೆಸ್ನ ಗೆಲುವಿನ ಮತ್ತೊಂದು ಪ್ರಮುಖ ಅಂಶವೆಂದರೆ ವಿಪಕ್ಷಗಳ ಕೋಟೆಯಲ್ಲಿಯೂ ಸದ್ದು ಮಾಡಿರುವುದು. ಪಕ್ಷದ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ 11 ಹೆಚ್ಚುವರಿ ಮತಗಳನ್ನು ಸೆಳೆಯುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಅಂತರವೂ ಹೆಚ್ಚಾಗಿದೆ.
ಸಿಎಂ ಸ್ಥಾನದಲ್ಲಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಎದುರಿಸಿದ ಮೊದಲ ಪ್ರಮುಖ ಮೇಲ್ಮನೆ ಚುನಾವಣೆಯಲ್ಲೇ ಡಿಕೆಶಿ ರೂಪಿಸಿದ ತಂತ್ರಗಳು ಫಲ ನೀಡಿವೆ. ಶಾಸಕರ ನಿರ್ವಹಣೆ, ಮತದಾನ ತಂತ್ರ, ಹೈಟೆಕ್ ಕಣ್ಗಾವಲು ಹಾಗೂ ರಾಜಕೀಯ ಲೆಕ್ಕಾಚಾರಗಳ ಸಮನ್ವಯವೇ ಕಾಂಗ್ರೆಸ್ನ 5ಕ್ಕೆ 5 ಗೆಲುವಿನ ಹಿಂದಿನ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಯಾವ್ಯಾವ ಅಭ್ಯರ್ಥಿಗೆ ಎಷ್ಟು ಮತ?
- ಜೆಡಿಎಸ್ ಅಭ್ಯರ್ಥಿ ಗೋವಿಂದರಾಜುಗೆ 14 ಮತಗಳು
- ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ಗೆ 30 ಮತಗಳು
- ಕಾಂಗ್ರೆಸ್ನ ತಿಪ್ಪಣ್ಣಪ್ಪ ಕಮಕನೂರುಗೆ 30 ಮತಗಳು
- ಕಾಂಗ್ರೆಸ್ನ ಪಿ.ವಿ.ಮೋಹನ್ಗೆ 29 ಮತಗಳು
- ಕಾಂಗ್ರೆಸ್ನ ಬಿ.ಎಸ್.ಶಿವಣ್ಣಗೆ 30 ಮತಗಳು
- ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ 32 ಮತ
- ಬಿಜೆಪಿ ಅಭ್ಯರ್ಥಿ ಆರ್.ರಘುಗೆ 29 ಮತಗಳು
- ಬಿಜೆಪಿ ಅಭ್ಯರ್ಥಿ ಲಿಂಗರಾಜು ಪಾಟೀಲ್ಗೆ 27 ಮತಗಳು
ಇದನ್ನೂ ಓದಿ : 7 ಕೋಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇದೇ ತಿಂಗಳು ಶೇ.8.25ರಷ್ಟು ಬಡ್ಡಿ ಜಮೆ!


















