ಕೊಚ್ಚಿ : ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕುಂಭಮೇಳ ಖ್ಯಾತಿಯ ಯುವತಿ ಮೊನಾಲಿಸಾ ಭೋಸ್ಲೆ ಮತ್ತು ಆಕೆಯ ಪತಿ ಮೊಹಮ್ಮದ್ ಫರ್ಮಾನ್ ಖಾನ್ ಅವರ ನಿರೀಕ್ಷಿತ ಜಾಮೀನು ಅರ್ಜಿಯ ಮೇಲಿನ ತೀರ್ಪನ್ನು ಕೇರಳ ಹೈಕೋರ್ಟ್ ಕಾಯ್ದಿರಿಸಿದೆ. ಎರಡು ರಾಜ್ಯಗಳ ನಡುವಿನ ಸಂಕೀರ್ಣ ಕಾನೂನು ಹೋರಾಟವಾಗಿ ಮಾರ್ಪಟ್ಟಿರುವ ಈ ಅಂತರ್ ಧರ್ಮೀಯ ವಿವಾಹದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು ನಡೆಸಿದ ಮೌಖಿಕ ಅವಲೋಕನಗಳು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಮಧ್ಯಪ್ರದೇಶದಲ್ಲಿ ತಮಗೆ ಜೀವಬೆದರಿಕೆ ಇದೆ ಎಂದು ದಂಪತಿ ಅಳಲು ತೋಡಿಕೊಂಡಾಗ, ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರು “ನೀವು ಕೇರಳದಲ್ಲಿ ಇರುವುದೇ ನಿಮ್ಮ ಅದೃಷ್ಟ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದಂಪತಿಯ ಪರ ವಕೀಲರು, “ನಾವು ಇನ್ನೂ ಜೀವಂತವಾಗಿರಲು ಅದೇ ಏಕೈಕ ಕಾರಣ” ಎಂದು ಕೋರ್ಟ್ಗೆ ತಿಳಿಸಿದರು.
ಏನಿದು ವಿವಾದ?
ಕಳೆದ 2025ರ ಕುಂಭಮೇಳದಲ್ಲಿ ಮೊನಾಲಿಸಾ ಮಣಿಗಳ ಹಾರವನ್ನು ಮಾರಾಟ ಮಾಡುತ್ತಿದ್ದಳು. ಆಕೆಯ ತೀಕ್ಷ್ಣ ಕಣ್ಣುಗಳು, ಮುಖಲಕ್ಷಣದ ವಿಡಿಯೋ ಕ್ಷಣಮಾತ್ರದಲ್ಲಿ ಎಲ್ಲೆಡೆ ವೈರಲ್ ಆಗಿತ್ತು. ನಂತರದಲ್ಲಿ ಮೊನಾಲಿಸಾ ದೇಶಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಸಿದ್ಧಿ ಪಡೆದಿದ್ದರು. ಇವರು ಪ್ರಸಕ್ತ ವರ್ಷದ ಆರಂಭದಲ್ಲಿ ಕೇರಳದಲ್ಲಿ ಮೊಹಮ್ಮದ್ ಫರ್ಮಾನ್ ಖಾನ್ ಎಂಬ ಯುವಕನನ್ನು ವಿವಾಹವಾಗಿದ್ದರು. ಆದರೆ, ಈ ಮದುವೆಯ ಬೆನ್ನಲ್ಲೇ ಯುವತಿಯ ವಯಸ್ಸಿನ ವಿಚಾರದಲ್ಲಿ ವಿವಾದ ಆರಂಭವಾಯಿತು.
ಮದುವೆಯ ಸಮಯದಲ್ಲಿ ಮೊನಾಲಿಸಾ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಯಿತು. ಆದರೆ ದಂಪತಿಯ ಪರ ವಾದ ಮಂಡಿಸಿದ ವಕೀಲ ಎಂ. ಶಶೀಂದ್ರನ್, ಮದುವೆಯಾಗುವಾಗ ಯುವತಿಗೆ ಕಾನೂನುಬದ್ಧ ವಯಸ್ಸಾಗಿತ್ತು, ಆದರೆ ಕೆಲವು ಮೂಲಭೂತವಾದಿ ಸಂಘಟನೆಗಳು ಮತ್ತು ಮಧ್ಯಪ್ರದೇಶ ಆಡಳಿತದ ಕೆಲವು ವಿಭಾಗಗಳು ಈ ವಿವಾಹವನ್ನು ಅಸಿಂಧುಗೊಳಿಸಲು ಆಕೆಯ ವಯಸ್ಸಿನ ದಾಖಲೆಗಳನ್ನು ವ್ಯವಸ್ಥಿತವಾಗಿ ತಿದ್ದಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಧ್ಯಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ದಂಪತಿಯ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದಾರೆ. ವರನು ಮುಸ್ಲಿಂ ಆಗಿದ್ದರೂ ಹಿಂದೂ ಸಂಪ್ರದಾಯದ ಪ್ರಕಾರ ಈ ಮದುವೆ ನಡೆದಿರುವುದರಿಂದ ಇದು ಕಾನೂನುಬದ್ಧವಾಗಿ ಸಿಂಧುವಾಗುವುದಿಲ್ಲ ಎಂದು ಅವರು ವಾದಿಸಿದ್ದಾರೆ. ಅಷ್ಟೇ ಅಲ್ಲದೆ, ಮೊನಾಲಿಸಾ ಅವರ ನಿಜವಾದ ಜನ್ಮದಿನಾಂಕ ಡಿಸೆಂಬರ್ 2009 ಆಗಿದ್ದು, ಮದುವೆಯ ಸಮಯದಲ್ಲಿ ಆಕೆ ಅಪ್ರಾಪ್ತೆಯಾಗಿದ್ದರಿಂದ ಇದು ಬಾಲನ್ಯಾಯ ಕಾಯ್ದೆಯಡಿ ಅಪರಾಧವಾಗುತ್ತದೆ ಎಂದಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನನ ಹಾಗೂ ವಿವಾಹ ಪ್ರಮಾಣಪತ್ರಗಳನ್ನು ಪಡೆದಿರುವ ಕಾರಣ, ಫರ್ಮಾನ್ ಖಾನ್ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣಕ್ಕೆ ನಕಲಿ ದಾಖಲೆ ಸೃಷ್ಟಿಯ ಸೆಕ್ಷನ್ಗಳನ್ನೂ ಸೇರಿಸಲಾಗುವುದು ಎಂದು ಸರ್ಕಾರ ಕೋರ್ಟ್ಗೆ ತಿಳಿಸಿತು. ಆದರೆ, ಸ್ವತಃ ಸಂತ್ರಸ್ತೆ ಎನ್ನಲಾದ ಯುವತಿಯೇ ಪತಿಯ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂಬುದನ್ನು ಹೈಕೋರ್ಟ್ ಈ ವೇಳೆ ಎತ್ತಿ ತೋರಿಸಿತು.
ರಾಜಕೀಯ ಆಯಾಮ ಪಡೆದ ಪ್ರಕರಣ
ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅಂತರ್ಧರ್ಮೀಯ ವಿವಾಹದ ಸುತ್ತ ಸುತ್ತುತ್ತಿರುವ ಈ ಪ್ರಕರಣವು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ತಿರುವನಂತಪುರದ ಪೋಕ್ಸೊ (POCSO) ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಖಾಸಗಿ ದೂರಿನಾಧಾರದ ಮೇಲೆ ಸಿಪಿಎಂ ನಾಯಕರಾದ ಎಂ.ವಿ. ಗೋವಿಂದನ್, ವಿ. ಶಿವನ್ಕುಟ್ಟಿ ಮತ್ತು ಎ.ಎ. ರಹೀಮ್ ಸೇರಿದಂತೆ ಹಲವರ ವಿರುದ್ಧ ಈ ಮದುವೆಗೆ ನೆರವು ನೀಡಿದ ಆರೋಪದಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ಕೇರಳ ಮತ್ತು ಮಧ್ಯಪ್ರದೇಶದ ನ್ಯಾಯಾಲಯಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುವ ಈ ಕಾನೂನು ಸಮರ ಹಾಗೂ ಇಂದು ಪ್ರಕಟವಾಗಲಿರುವ ಹೈಕೋರ್ಟ್ ತೀರ್ಪು ದೇಶದ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕ್ರಿಮಿನಲ್ ಹೊಣೆಗಾರಿಕೆಯ ಕಾನೂನು ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಎನಿಸಿಕೊಳ್ಳಲಿದೆ.
ಇದನ್ನೂ ಓದಿ : 700 ಜನರಿಂದ ಅತ್ಯಾಚಾರ, ಪಂಜರದಲ್ಲಿ ಕೂಡಿಹಾಕಿ ದೌರ್ಜನ್ಯ : ‘ಗ್ರೂಮಿಂಗ್ ಗ್ಯಾಂಗ್ಸ್’ ಕಹಿ ಸತ್ಯ ಬಹಿರಂಗ!



















