ಬೆಂಗಳೂರು : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಾಟಾ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಗರ್ಜನೆ ಹಾಗೂ ರೆಡ್ ಆರ್ಮಿ ಆರ್ಭಟಕ್ಕೆ ಸಿಕ್ಕ ಜಯದ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಆದರೆ, ಈ ಗೆಲುವಿನ ಸಂಭ್ರಮ ಆಚರಿಸುವ ಭರದಲ್ಲಿ ರಾಜ್ಯದ ಹಲವೆಡೆ ಆರ್ಸಿಬಿ ಅಭಿಮಾನಿಗಳು ಅತಿರೇಕದ ವರ್ತನೆ ಹಾಗೂ ಹುಚ್ಚಾಟ ಪ್ರದರ್ಶಿಸಿದ್ದು, ಇವರನ್ನು ಹತೋಟಿಗೆ ತರಲು ಪೊಲೀಸರು ಹಲವು ಕಡೆ ಲಾಠಿ ಬೀಸಬೇಕಾದ ಪ್ರಸಂಗ ಎದುರಾಯಿತು.
ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಆರ್ಸಿಬಿ ಅಭಿಮಾನಿಗಳ ದಂಡೇ ನೆರೆದಿತ್ತು. ಪಬ್ ಹಾಗೂ ರೆಸ್ಟೋರೆಂಟ್ಗಳಿಗೆ ಬಂದಿದ್ದ ಸಹಸ್ರಾರು ಜನ ರಸ್ತೆಗೆ ಇಳಿದು ಜೈಕಾರ ಹಾಕಿದರು. ಕಬ್ಬನ್ ಪಾರ್ಕ್ ಬಳಿ ಕೆಲವು ಯುವಕರು ಚಲಿಸುತ್ತಿದ್ದ ಕಾರುಗಳ ಸನ್ರೂಫ್ ಮೇಲೆ ನಿಂತು ಆರ್ಸಿಬಿ ಬಾವುಟ ಪ್ರದರ್ಶಿಸುತ್ತಾ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಕಳೆದ ಬಾರಿ ಕಪ್ ಗೆದ್ದ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ್ದ ಕಾಲ್ತುಳಿತ ದುರಂತವನ್ನು ನೆನಪಿನಲ್ಲಿಟ್ಟುಕೊಂಡಿದ್ದ ಪೊಲೀಸರು, ಈ ಬಾರಿ ಹೆಜ್ಜೆ ಹೆಜ್ಜೆಗೂ ಭದ್ರತಾ ಬೇಲಿ ಹಾಕಿ ಹದ್ದಿನ ಕಣ್ಣಿಟ್ಟಿದ್ದರು. ಅತಿರೇಕವಾಗಿ ವರ್ತಿಸಿದ ಯುವಕರಿಗೆ ಖಡಕ್ ವಾರ್ನಿಂಗ್ ನೀಡಿ ಮನೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ : ಸತತ ಎರಡನೇ IPL ಟ್ರೋಫಿ ಮುಡಿಗೇರಿಸಿಕೊಂಡ ಆರ್ಸಿಬಿ : ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಾಮ್ರಾಜ್ಯ!


















