ಬೆಂಗಳೂರು : ಬಿ-ಖಾತಾ ಹೊಂದಿರುವ ನಿವೇಶನ ಮಾಲೀಕರಿಗೆ ಎ-ಖಾತಾ ನೀಡುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆರಂಭಿಸಿರುವ ‘ನನ್ನ ಇ-ಖಾತಾ, ನನ್ನ ಹಕ್ಕು’ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ವಾರ ಆರಂಭಗೊಂಡ ಈ ಅಭಿಯಾನ ನಗರದ ಐದು ನಗರ ಪಾಲಿಕೆಗಳ ವ್ಯಾಪ್ತಿಯ 52 ಕೇಂದ್ರಗಳಲ್ಲಿ ಶನಿವಾರವೂ ನಡೆಯಿತು. ಆದರೆ, ಕಳೆದ 10 ದಿನಗಳಲ್ಲಿ ಕೇವಲ 2 ಸಾವಿರದಷ್ಟು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿರುವುದು ಅಧಿಕಾರಿಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ. ಶನಿವಾರ ನಡೆದ ಅಭಿಯಾನದಲ್ಲಿ 70 ಬಿ-ಖಾತಾ ಸ್ವತ್ತುಗಳಿಗೆ ಎ-ಖಾತಾ ವಿತರಣೆ ಮಾಡಲಾಗಿದೆ. ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಕೋರಿ 304 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 70 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ.
ಹಾಗೆಯೇ, 809 ಇ-ಖಾತಾ ಅರ್ಜಿಗಳ ಪೈಕಿ 573 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದ್ದು, ಇನ್ನೂ 356 ಅರ್ಜಿಗಳು ಬಾಕಿ ಉಳಿದಿವೆ. ಹೊಸ ಖಾತೆ ಕೋರಿ ಸಲ್ಲಿಕೆಯಾಗಿದ್ದ 234 ಅರ್ಜಿಗಳ ಪೈಕಿ 66 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇ-ಖಾತಾ, ಮ್ಯುಟೇಶನ್, ತಿದ್ದುಪಡಿ, ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಹಾಗೂ ಹೊಸ ಖಾತೆ ಸೇರಿದಂತೆ ಒಟ್ಟು 1,972 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 1,164 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 1,008 ಅರ್ಜಿಗಳು ಬಾಕಿ ಉಳಿದಿವೆ ಎಂದು ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಪಾಲಿಕೆವಾರು ಅಂಕಿಅಂಶಗಳನ್ನು ಗಮನಿಸಿದರೆ, ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಹಾಗೂ ಬಾಕಿ ಸೇರಿ ಒಟ್ಟು 285 ಇ-ಖಾತಾ ಅರ್ಜಿಗಳ ಪೈಕಿ 113 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪಶ್ಚಿಮ ನಗರ ಪಾಲಿಕೆಯಲ್ಲಿ 241 ಅರ್ಜಿಗಳ ಪೈಕಿ 123, ಉತ್ತರ ನಗರ ಪಾಲಿಕೆಯಲ್ಲಿ 52 ಅರ್ಜಿಗಳ ಪೈಕಿ 28 ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಸಲ್ಲಿಕೆಯಾಗಿದ್ದ 295 ಅರ್ಜಿಗಳ ಪೈಕಿ 231 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಕೇಂದ್ರ ನಗರ ಪಾಲಿಕೆಯಲ್ಲಿ ಸಲ್ಲಿಕೆಯಾಗಿದ್ದ 112 ಅರ್ಜಿಗಳ ಪೈಕಿ 78 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ನಗರದ ನಾಗರಿಕರಿಗೆ ಇ-ಖಾತಾ ಸೇರಿದಂತೆ ವಿವಿಧ ಖಾತಾ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಜಿಬಿಎ ಈ ವಿಶೇಷ ಅಭಿಯಾನ ಹಮ್ಮಿಕೊಂಡಿತ್ತು. ಆದರೆ, ಸಾರ್ವಜನಿಕರಿಂದ ನಿರಾಸೆ ಸ್ಪಂದನೆ ವ್ಯಕ್ತವಾಗಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಕೆಲ ನಾಗರಿಕರು ದಾಖಲೆಗಳ ಗೊಂದಲ, ತಾಂತ್ರಿಕ ಸಮಸ್ಯೆಗಳು ಹಾಗೂ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಮಾಹಿತಿ ಕೊರತೆಯಿಂದ ಅರ್ಜಿ ಸಲ್ಲಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.


















