ಬೈಂದೂರು : ಬೈಂದೂರು ಸಮೀಪದ ಕೆರಾಡಿಯ ಮೂಡ್ಗಲ್ ಶ್ರೀ ಕೇಶವನಾಥೇಶ್ವರ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಶಂಕರಪುರ ಏಕ ಜಾತಿ ಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಬುಧವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶ್ರೀದೇವರಿಗೆ ತ್ರಿಶೂಲ ಹಾಗೂ ಡಮರುಗವನ್ನು ಸಮರ್ಪಿಸಿದ್ದಾರೆ.
ದೇವಸ್ಥಾನಕ್ಕೆ ಆಗಮಿಸಿದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಮೊದಲು ಶ್ರೀ ಕೇಶವನಾಥೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ತ್ರಿಶೂಲ ಹಾಗೂ ಡಮರುಗವನ್ನು ದೇವರಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಶ್ರೀಕ್ಷೇತ್ರ ಶಂಕರಪುರ ದ್ವಾರಕಾಮಯಿ ಏಕಜಾತಿ ಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು, ಸಮಸ್ತ ಹಿಂದೂಗಳ ಮನಸ್ಸು ಒಂದಾಗಬೇಕು ಹಾಗೂ ಎಲ್ಲ ಹಿಂದೂಗಳ ರಕ್ಷಣೆಯಾಗಬೇಕು ಎಂಬ ಸಂಕಲ್ಪದೊಂದಿಗೆ ತ್ರಿಶೂಲ ಸಮರ್ಪಣೆ ಮಾಡಿದ್ದೇವೆ. ಸನಾತನ ಧರ್ಮದ ರಕ್ಷಣೆಯೊಂದಿಗೆ ಈ ಪವಿತ್ರ ಭೂಮಿ ಸೂರ್ಯ-ಚಂದ್ರ ಇರುವ ತನಕ ಶಾಶ್ವತವಾಗಿರಲಿ. ಎಲ್ಲಾ ಹಿಂದೂಗಳು ಪ್ರೀತಿ ಹಾಗೂ ಒಗ್ಗಟ್ಟಿನಲ್ಲಿ ಬದುಕಬೇಕು ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಕೇಶವನಾಥೇಶ್ವರ ದೇವಸ್ಥಾನ ಮೂಡ್ಗಲ್ ಅನುವಂಶಿ ಧರ್ಮದರ್ಶಿ ರಾಘವೇಂದ್ರ ಕಾರಂತ್, ಶಂಕರಪುರ ಮಠದ ಭಕ್ತರಾದ ಗಜೇಂದ್ರ ಎಸ್ ಬೇಲೆಮನೆ, ನಾಗರಾಜ್ ಪೂಜಾರಿ ಹೇರೂರು, ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಸೇವಾ ಟ್ರಸ್ಟ್ನ ಸ್ಥಾಪಕರಾದ ಪ್ರವೀಣ್ ಎಸ್. ಕುಂಪಲ, ಪುರುಷೋತ್ತಮ ಕಲ್ಲಾಪು, ಟ್ರಸ್ಟಿಗಳಾದ ನರೇಶ್ ಚೌಟ ಮುಳಿಹಿತ್ಲು, ಗಣೇಶ್ ಪಂಡಿತ್, ಪ್ರಶಾಂತ್ ಗಟ್ಟಿ ಕಾಯಂಗಳ, ಸೇವಕರಾದ ಪ್ರವೀಣ್ ಮೆಸ್ಕಾಂ, ಶವಿತ್ ಉಚ್ಚಿಲ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಮೀನುಗಾರರಿಗೆ ಬಿರುಗಾಳಿ ಎಚ್ಚರಿಕೆ ; ಮೇ 23ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ!



















