ಬೆಂಗಳೂರು : ಬೆಂಗಳೂರು ನಗರ ಭೂಮಾಲೀಕರಿಗೆ ಮಹತ್ವದ ನೆರವಾಗುವ “ನನ್ನ ಇ-ಖಾತಾ ನನ್ನ ಹಕ್ಕು” ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮತ್ತು ಡಿಜಿಟಲೀಕರಣಗೊಳಿಸಿ, ಇ-ಖಾತೆ ವಿತರಣೆ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಜಾರಿಗೊಳ್ಳುತ್ತಿರುವ “ಭೂ ಗ್ಯಾರಂಟಿ” ಯೋಜನೆಯ ಭಾಗವಾಗಿ ಈ ಅಭಿಯಾನ ಆರಂಭವಾಗುತ್ತಿದೆ. ಬಿ-ಖಾತಾವನ್ನು ಎ-ಖಾತಾಗೆ ಪರಿವರ್ತಿಸಲು ಮಾರ್ಗಸೂಚಿ ಮೌಲ್ಯದ ಶೇ.5 ಬದಲಿಗೆ ಕೇವಲ ಶೇ.2 ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಸೌಲಭ್ಯವು ಕೇವಲ 100 ದಿನಗಳವರೆಗೆ ಮಾತ್ರ ಲಭ್ಯವಿರಲಿದೆ.
ಪ್ರತಿ ಶನಿವಾರವೂ ಬೆಂಗಳೂರಿನಾದ್ಯಂತ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇಂದು ಮೊದಲ ದಿನವೇ 52 ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತೀ ಕೇಂದ್ರದಲ್ಲಿ 100ರಿಂದ 200 ನಾಗರಿಕರಿಗೆ ಸೇವೆ ನೀಡುವ ಗುರಿ ಹೊಂದಲಾಗಿದೆ. ಹೆಚ್ಚುವರಿ ಜನಸಂದಣಿ ಕಂಡುಬಂದರೆ ಟೋಕನ್ ವ್ಯವಸ್ಥೆ ಮೂಲಕ ಮುಂದಿನ ವಾರ ಅರ್ಜಿ ಸ್ವೀಕಾರ ಮಾಡಲಾಗುತ್ತದೆ.
ಕೇಂದ್ರಗಳಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳು:
ಇ-ಖಾತಾ ವಿತರಣೆ.
ಹೊಸ ಇ-ಖಾತಾ ಅರ್ಜಿ.
ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ.
ಬಾಕಿ ಇರುವ ಅರ್ಜಿಗಳ ತಿದ್ದುಪಡಿ ಮತ್ತು ಅಹವಾಲು ಪರಿಹಾರ.
ಹೊಸ ಅರ್ಜಿದಾರರಿಗೆ ಮಾರ್ಗದರ್ಶನ ಮತ್ತು ತರಬೇತಿ.
ಸ್ಥಳದಲ್ಲೇ ಪಾವತಿ, ಸ್ಕ್ಯಾನಿಂಗ್ ಮತ್ತು ದಾಖಲೆ ಪರಿಶೀಲನೆ ಸೌಲಭ್ಯ
ನಾಗರಿಕರಿಗೆ ವಿಶೇಷ ವ್ಯವಸ್ಥೆಗಳು
ಪ್ರತಿ ಕೇಂದ್ರದಲ್ಲೂ ಸಹಾಯ ಕೌಂಟರ್, ಆಸನ ವ್ಯವಸ್ಥೆ, ಇಂಟರ್ನೆಟ್ ಹೊಂದಿದ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಪಾವತಿ ನೆರವು ಹಾಗೂ ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಹಾಯಕ ಕಂದಾಯಾಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ತಾಂತ್ರಿಕ ತಂಡಗಳು ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದ್ದಾರೆ.
ಆಸ್ತಿ ಸಂಬಂಧಿತ ಎಲ್ಲಾ ದಾಖಲೆಗಳು, ಗುರುತಿನ ಚೀಟಿ ಮತ್ತು ಅರ್ಜಿ ವಿವರಗಳೊಂದಿಗೆ ಕೇಂದ್ರಗಳಿಗೆ ಭೇಟಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅಭಿಯಾನದ ಉದ್ದೇಶ
ಬಾಕಿ ಪ್ರಕರಣಗಳ ನಿವಾರಣೆ
ನಾಗರಿಕ ಸ್ನೇಹಿ ಸೇವೆ
ಪಾರದರ್ಶಕತೆ ಹೆಚ್ಚಳ
ವೇಗವಾದ ಇ-ಖಾತಾ ವಿತರಣೆ
ವಂಚನೆ ತಡೆ ಮತ್ತು ಭೂ ದಾಖಲೆಗಳ ಭದ್ರತೆ
ಪ್ರಮುಖ ಕೇಂದ್ರಗಳು
ಅಭಿಯಾನವು ಜಿಬಿಎ ವ್ಯಾಪ್ತಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ನಗರ ಪಾಲಿಕೆಗಳ ವಿವಿಧ ಪ್ರದೇಶಗಳಲ್ಲಿ ನಡೆಯಲಿದೆ. ವೈಟ್ಫೀಲ್ಡ್, ಮಾರತಹಳ್ಳಿ, ಕೆ.ಆರ್.ಪುರಂ, ಜಯನಗರ, ಹೆಬ್ಬಾಳ, ಯಲಹಂಕ, ಕೆಂಗೇರಿ, ಬಿಟಿಎಂ ಲೇಔಟ್, ಎಚ್ಎಸ್ಆರ್ ಲೇಔಟ್, ಶಿವಾಜಿನಗರ ಸೇರಿದಂತೆ 52 ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್ ತಿಳಿಸಿದರು.


















