ಚೆನ್ನೈ : ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ, ನಟ ‘ದಳಪತಿ’ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ, ಈ ಐತಿಹಾಸಿಕ ಬೆಳವಣಿಗೆಯ ಹಿಂದೆ ನಿರ್ಗಮಿತ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್ ಅವರ ಪ್ರಮುಖ ಪಾತ್ರವಿದೆ ಎಂದು ಡಿಎಂಕೆ ಹೇಳಿಕೊಂಡಿದೆ. ಟಿವಿಕೆ ಜೊತೆ ಕೈಜೋಡಿಸುವಂತೆ ಸ್ಟಾಲಿನ್ ಅವರೇ ತಮ್ಮ ಮೈತ್ರಿಕೂಟದ ಪಕ್ಷಗಳ ಮನವೊಲಿಸಿದ್ದಾರೆ ಎಂದು ಡಿಎಂಕೆ ವಕ್ತಾರ ಎ. ಶರವಣನ್ ತಿಳಿಸಿದ್ದಾರೆ.
ಸಾಂವಿಧಾನಿಕ ಬಿಕ್ಕಟ್ಟು ತಪ್ಪಿಸುವ ಉದ್ದೇಶ
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗುತ್ತಿರುವ ವಿಜಯ್ ಅವರಿಗೆ ಡಿಎಂಕೆ ಅಭಿನಂದನೆ ಸಲ್ಲಿಸಿದೆ. ಡಿಎಂಕೆ ಮಿತ್ರಪಕ್ಷಗಳ ಬೆಂಬಲದಿಂದಲೇ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಸುದೀರ್ಘ ಚರ್ಚೆಗಳ ಬಳಿಕ, ಟಿವಿಕೆಗೆ ಬೆಂಬಲ ನೀಡುವಂತೆ ಸ್ಟಾಲಿನ್ ಅವರೇ ಮಿತ್ರಪಕ್ಷಗಳ ಮನವೊಲಿಸಿದರು ಎಂದು ಶರವಣನ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಇಂಡಿಯಾ ಒಕ್ಕೂಟದಿಂದ ಹೊರಬಂದು ಟಿವಿಕೆಗೆ ಮೊದಲು ಬೆಂಬಲ ಸೂಚಿಸಿದ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಡಿಎಂಕೆ ಕಾರ್ಯಕರ್ತರ ಶ್ರಮದಿಂದಾಗಿಯೇ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ತಿರುಗೇಟು ನೀಡಿದ್ದಾರೆ.
ಮ್ಯಾಜಿಕ್ ನಂಬರ್ ತಲುಪಿದ ಟಿವಿಕೆ
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಬಹುಮತಕ್ಕೆ (118) 10 ಸ್ಥಾನಗಳ ಕೊರತೆ ಎದುರಿಸುತ್ತಿತ್ತು. ಅದಲ್ಲದೆ, ವಿಜಯ್ ಅವರು ತಾವು ಸ್ಪರ್ಧಿಸಿದ್ದ ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ- ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದರಿಂದ ಪಕ್ಷದ ಬಲ 107ಕ್ಕೆ ಕುಸಿಯಿತು. ಈ ಹಂತದಲ್ಲಿ ಕಾಂಗ್ರೆಸ್ನ 5 ಹಾಗೂ ಸಿಪಿಐ ಮತ್ತು ಸಿಪಿಐ(ಎಂ)ನ ತಲಾ ಇಬ್ಬರು ಶಾಸಕರು ಬೆಂಬಲ ನೀಡಿದ್ದರಿಂದ ಈ ಸಂಖ್ಯೆ 116ಕ್ಕೆ ಏರಿಕೆಯಾಗಿತ್ತು. ಅಂತಿಮವಾಗಿ ಶನಿವಾರ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಶಾಸಕರು ಬೆಂಬಲ ಸೂಚಿಸಿದ ಬಳಿಕ, ಟಿವಿಕೆ ಬಲ 120ಕ್ಕೆ ಏರಿಕೆಯಾಗುವ ಮೂಲಕ ಸರಳ ಬಹುಮತದ ಗಡಿ ದಾಟಲು ಸಾಧ್ಯವಾಯಿತು.
60 ವರ್ಷಗಳ ಬಳಿಕ ಹೊಸ ಇತಿಹಾಸ: ಇಂದು ಪ್ರಮಾಣ ವಚನ
ಮ್ಯಾಜಿಕ್ ನಂಬರ್ ತಲುಪುತ್ತಿದ್ದಂತೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್, ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲ ಪತ್ರಗಳನ್ನು ಹಸ್ತಾಂತರಿಸಿದರು. ವಿಜಯ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವ ರಾಜ್ಯಪಾಲರು, ಮೇ 13ರೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ, ಕಳೆದ 60 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಹೊರತುಪಡಿಸಿದ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ವಿಶೇಷವೆಂದರೆ, ಅಧಿಕಾರ ಹಂಚಿಕೆಗೆ ವಿಜಯ್ ಮುಕ್ತ ಮನಸ್ಸು ಹೊಂದಿದ್ದರೂ, ಟಿವಿಕೆಗೆ ಬಾಹ್ಯ ಬೆಂಬಲ ನೀಡುತ್ತಿರುವ ವಿಸಿಕೆ ಸೇರಿದಂತೆ ಇತರ ಪಕ್ಷಗಳು ತಾವು ಈಗಲೂ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿವೆ. ಇದು ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಕುತೂಹಲಕಾರಿ ಅಧ್ಯಾಯಕ್ಕೆ ನಾಂದಿ ಹಾಡಿದೆ.
ಇದನ್ನೂ ಓದಿ : ತಮಿಳುನಾಡಲ್ಲಿ ಹೊಸ ಯುಗಾರಂಭ – ಸಿಎಂ ಆಗಿ ಇಂದು ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕಾರ!



















