ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಭಾಗದಲ್ಲಿ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಮಗುವನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಮಾಡಿದ್ದಾರೆ. ಸುಮಾರು 12 ಗಂಟೆಗಳ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಮಗು ಟೀ ತೋಟದ ಪ್ರದೇಶದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದೆ.
ಮಧ್ಯ ಪ್ರದೇಶದ ಭೋಪಾಲ್ ಮೂಲದ ಗೋನು ಹಾಗೂ ಸೋನು ದಂಪತಿ ಟೀ ಎಸ್ಟೇಟ್ನಲ್ಲಿ ಕೆಲಸಕ್ಕಾಗಿ ಬಾಳೂರು ಸಮೀಪಕ್ಕೆ ಬಂದಿದ್ದರು. ನಿನ್ನೆ ಸಂಜೆ ಅವರ ಒಂದೂವರೆ ವರ್ಷದ ಮಗು ಆಟವಾಡುತ್ತಿದ್ದ ವೇಳೆ ಏಕಾಏಕಿ ಕಾಣೆಯಾಗಿತ್ತು. ಮಗುವಿನ ಸುಳಿವು ಸಿಗದೇ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು.
ಮಗು ನಾಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದು, ಟೀ ತೋಟ, ಕಾಡು ಪ್ರದೇಶ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಶೋಧ ನಡೆಸಲಾಯಿತು. ರಾತ್ರಿ ಪೂರ್ತಿ ನಡೆದ ಕಾರ್ಯಾಚರಣೆಯಲ್ಲಿ ಸ್ಥಳೀಯರು ಕೂಡ ಪೊಲೀಸರಿಗೆ ಸಹಕಾರ ನೀಡಿದರು.
ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆಗೆ ಮೂಡಿಗೆರೆ ಸಿಪಿಐ ರಾಜಶೇಖರ್, ಬಾಳೂರು ಪಿಎಸ್ಐ ಹಾಗೂ ಬಣಕಲ್ ಪಿಎಸ್ಐ ನೇತೃತ್ವ ವಹಿಸಿದ್ದರು. ವಿವಿಧ ಪೊಲೀಸ್ ತಂಡಗಳು ಪ್ರತ್ಯೇಕವಾಗಿ ಹುಡುಕಾಟ ನಡೆಸಿ ಮಗುವಿನ ಪತ್ತೆಗೆ ಮುಂದಾಗಿದ್ದರು. ಸುಮಾರು 12 ಗಂಟೆಗಳ ನಿರಂತರ ಹುಡುಕಾಟದ ಬಳಿಕ ಮಗು ಟೀ ತೋಟದೊಳಗೆ ಪತ್ತೆಯಾಗಿದೆ. ಮಗು ಸುರಕ್ಷಿತವಾಗಿದ್ದು, ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಮಗುವನ್ನು ಕಂಡ ಕ್ಷಣ ಕುಟುಂಬದವರು ಭಾವುಕರಾಗಿದ್ದು, ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಪೊಲೀಸರ ತ್ವರಿತ ಕಾರ್ಯಾಚರಣೆ ಹಾಗೂ ರಾತ್ರಿ ಪೂರ್ತಿ ನಡೆಸಿದ ಶೋಧ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಮಗು ಸುರಕ್ಷಿತವಾಗಿ ಪತ್ತೆಯಾಗಿದೆ ಎಂದು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
ಇದನ್ನೂ ಓದಿ : ಗಂಭೀರ್ ‘ದರ್ಬಾರ್’ಗೆ ಡ್ರೆಸ್ಸಿಂಗ್ ರೂಮ್ ತತ್ತರ : ಟೀಮ್ ಇಂಡಿಯಾ ಕೋಚ್ ವಿರುದ್ಧ ಗಂಭೀರ ಆರೋಪ!



















