ವಿಜಯನಗರ : ಜಿಲ್ಲೆಯ ಹೊಸಪೇಟೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಳ್ಳತನ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮದುವೆ ಮಂಟಪಕ್ಕೆ ನುಗ್ಗಿದ ಖದೀಮ, ಮಧುಮಗಳಿಗೆ ಹಾಕಬೇಕಾಗಿದ್ದ ತಾಳಿ ಸೇರಿದಂತೆ ಚಿನ್ನ, ಬೆಳ್ಳಿ ಹಾಗೂ ನಗದು ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ.
ಚಿತ್ತವಾಡ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಮೇ 4ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಬ್ಯಾಗ್ ಸಮೇತ ಕಳ್ಳ ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.
ಕಳ್ಳತನಗೊಂಡ ಬ್ಯಾಗ್ನಲ್ಲಿ ಸುಮಾರು 40 ಗ್ರಾಂ ಚಿನ್ನದ ಸರ, ಅರ್ಧ ಕೆಜಿ ಬೆಳ್ಳಿ, 10 ಸಾವಿರ ರೂ. ನಗದು ಹಾಗೂ ಎರಡು ಮೊಬೈಲ್ ಫೋನ್ಗಳು ಇದ್ದವು ಎಂದು ತಿಳಿದುಬಂದಿದೆ. ಮದುವೆ ಮನೆಯ ಸಂಭ್ರಮದ ನಡುವೆಯೇ ನಡೆದ ಈ ಕಳ್ಳತನ ಕುಟುಂಬಸ್ಥರಿಗೆ ಶಾಕ್ ನೀಡಿದೆ.
ಘಟನೆ ಸಂಬಂಧ ವಿನೋದ್ ಎಂಬುವರು ಪೊಲೀಸರಿಗೆ ದೂರು ನೀಡಲು ತೆರಳಿದ್ದರೂ, ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. “ಒಂದೇ ಬಿಲ್ನಲ್ಲಿ ನಾಲ್ಕು ಐಟಂಗಳು ಇವೆ. ಅದರಲ್ಲಿ ಎರಡು ಐಟಂ ಮಾತ್ರ ಕಳ್ಳತನವಾಗಿದೆ ಎಂದು ಹೇಳಿದ್ದೀರಿ. ಉಳಿದ ಎರಡು ಐಟಂಗಳನ್ನು ಕೂಡ ತೆಗೆದುಕೊಂಡು ಬನ್ನಿ, ಆಮೇಲೆ ದೂರು ದಾಖಲಿಸಿಕೊಳ್ಳುತ್ತೇವೆ” ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ದೂರಲಾಗಿದೆ.
ಘಟನೆ ನಡೆದು ಎರಡು ದಿನ ಕಳೆದರೂ ಇದುವರೆಗೆ ಅಧಿಕೃತವಾಗಿ ದೂರು ದಾಖಲಾಗಿಲ್ಲ ಎನ್ನಲಾಗಿದೆ. ಇದರಿಂದ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಳ್ಳತನದಂತಹ ಗಂಭೀರ ಪ್ರಕರಣದಲ್ಲೂ ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಸಿಸಿಟಿವಿಯಲ್ಲಿ ಸ್ಪಷ್ಟ ದೃಶ್ಯಗಳಿದ್ದರೂ ಪ್ರಕರಣ ದಾಖಲಿಸದೇ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮಿಡ್ನೈಟ್ ಬಸ್ ಸ್ಟ್ಯಾಂಡಲ್ಲಿ ಮಾರುವೇಷದಲ್ಲಿ ನಿಂತ ಮಹಿಳಾ IPS ಅಧಿಕಾರಿ : ಅಸಭ್ಯವಾಗಿ ವರ್ತಿಸಿದ 40 ಕಾಮುಕರು!


















