ನವದೆಹಲಿ: 30 ವರ್ಷದ ಯುವ ನ್ಯಾಯಾಧೀಶರೊಬ್ಬರು ದೆಹಲಿಯ ಸಫ್ದರ್ಜಂಗ್ ಪ್ರದೇಶದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ನ್ಯಾಯಾಧೀಶರನ್ನು ಅಮನ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ತಮ್ಮ ಮಗನಿಗೆ ವಿಪರೀತ ಕಿರುಕುಳ ನೀಡಲಾಗುತ್ತಿತ್ತು ಹಾಗೂ ಆತ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆಗೂ ಮುನ್ನ ಅಂದರೆ ಶನಿವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಅಮನ್ ಕುಮಾರ್ ಶರ್ಮಾ ಅವರು ತಮ್ಮ ತಂದೆ ಪ್ರೇಮ್ ಶರ್ಮಾ ಅವರಿಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು ಎನ್ನಲಾಗಿದೆ. “ನಾನು ತುಂಬಾ ಸಂಕಷ್ಟದಲ್ಲಿದ್ದೇನೆ, ನನಗೆ ಬದುಕುವುದು ಕಷ್ಟವಾಗುತ್ತಿದೆ. ಕಳೆದ ಎರಡು ತಿಂಗಳುಗಳಿಂದ ನನಗೆ ತೀವ್ರ ಕಿರುಕುಳ ನೀಡಲಾಗುತ್ತಿದೆ” ಎಂದು ಅಮನ್ ಭಾವುಕರಾಗಿ ನುಡಿದಿದ್ದರು. ಇದರಿಂದ ಆತಂಕಗೊಂಡ ತಂದೆ ಪ್ರೇಮ್ ಶರ್ಮಾ, ರಾಜಸ್ಥಾನದ ಆಲ್ವಾರ್ನಿಂದ ರಾತ್ರೋರಾತ್ರಿ ದೆಹಲಿಯತ್ತ ಧಾವಿಸಿದ್ದರು.
ಮಧ್ಯರಾತ್ರಿ ತಂದೆ ಮನೆಗೆ ತಲುಪುವುದಕ್ಕೂ ಮುನ್ನವೇ, ಅಮನ್ ಮತ್ತು ಆತನ ಪತ್ನಿಯ (ಇವರು ಕೂಡ ನ್ಯಾಯಾಧೀಶೆ) ನಡುವೆ ತೀವ್ರ ವಾಗ್ವಾದ ನಡೆದಿತ್ತು. “ಆತನ ಪತ್ನಿ ವಿಪರೀತ ಕೋಪಗೊಂಡು ಜೋರಾಗಿ ಕೂಗಾಡುತ್ತಿದ್ದಳು, ಅಮನ್ ಅಳುತ್ತಿದ್ದ. ನಂತರ ಇದ್ದಕ್ಕಿದ್ದಂತೆ ಮನೆಯಲ್ಲಿ ಸಂಪೂರ್ಣ ಮೌನ ಆವರಿಸಿತು” ಎಂದು ಮೃತರ ಸಂಬಂಧಿ ರಾಜೇಶ್ ಶರ್ಮಾ ಆರೋಪಿಸಿದ್ದಾರೆ.
ಶೌಚಾಲಯದಲ್ಲಿ ಪತ್ತೆಯಾದ ಮೃತದೇಹ
ಮನೆಯಲ್ಲಿ ಮೌನ ಆವರಿಸಿದ ಬಳಿಕ ತಂದೆ ಮಗನನ್ನು ಹುಡುಕಾಡಿದ್ದಾರೆ. ಆದರೆ ಆತ ಕೋಣೆಯಲ್ಲಿರಲಿಲ್ಲ. ಫೋನ್ಗೆ ಕರೆ ಮಾಡಿದಾಗ ಶೌಚಾಲಯದ ಒಳಗಡೆಯಿಂದ ರಿಂಗ್ಟೋನ್ ಕೇಳಿಬಂದಿದೆ. ಎಷ್ಟೇ ಬಾರಿ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಆತಂಕಗೊಂಡು ನೆರೆಹೊರೆಯವರನ್ನು ಕರೆದು ಶೌಚಾಲಯದ ಹಿಂಭಾಗದ ಕಿಟಕಿಯ ಗಾಜು ಒಡೆದು ನೋಡಲಾಗಿದೆ. ಈ ವೇಳೆ ಅಮನ್ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಕ್ಷಣವೇ ಬಾಗಿಲು ಒಡೆದು ಅವರನ್ನು ಕೆಳಗಿಳಿಸಿ ಸಮೀಪದ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಘಟನೆ ಕುರಿತು ಅಮನ್ ಅವರ ಭಾವ ಶಿವಂ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. “ಸದ್ಯದ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಕೊಲೆಯ (ಫೌಲ್ ಪ್ಲೇ) ಲಕ್ಷಣಗಳು ಕಂಡುಬಂದಿಲ್ಲ. ಆದಾಗ್ಯೂ, ಕುಟುಂಬದವರ ಆರೋಪಗಳ ಹಿನ್ನೆಲೆಯಲ್ಲಿ ಎಲ್ಲಾ ಕೋನಗಳಿಂದಲೂ ತನಿಖೆ ಮುಂದುವರಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಬಂಧಪಟ್ಟವರ ಹೇಳಿಕೆಗಳನ್ನು ಕಲೆಹಾಕಲಾಗುತ್ತಿದೆ.
ಪುಣೆಯ ಸಿಂಬಯಾಸಿಸ್ ಲಾ ಸ್ಕೂಲ್ನಲ್ಲಿ ಕಾನೂನು ಪದವಿ ಪಡೆದಿದ್ದ ಅಮನ್ ಕುಮಾರ್ ಶರ್ಮಾ, ಜೂನ್ 19, 2021 ರಂದು ದೆಹಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಗೊಂಡಿದ್ದರು. ವೃತ್ತಿಯಲ್ಲಿ ಅತ್ಯಂತ ಭರವಸೆ ಮೂಡಿಸಿದ್ದ ಇವರು, ಅಕ್ಟೋಬರ್ 2025 ರಿಂದ ಕರ್ಕರ್ಡೂಮಾ ನ್ಯಾಯಾಲಯದಲ್ಲಿ ಈಶಾನ್ಯ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್ಎಸ್ಎ) ಪೂರ್ಣಾವಧಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಯುವ ನ್ಯಾಯಾಧೀಶನ ಈ ಹಠಾತ್ ಸಾವು ಕಾನೂನು ವಲಯದಲ್ಲಿ ತೀವ್ರ ಆಘಾತ ಮೂಡಿಸಿದ್ದು, ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ಬಯಲಾಗಬೇಕಿದೆ.



















