ಬೆಂಗಳೂರು : ಬ್ರ್ಯಾಂಡ್ ಬೆಂಗಳೂರಾಗಿ ಬೆಳೆದು ಬರುತ್ತಿರುವ ನಗರ ಇಂದು ಸಮಸ್ಯೆಗಳ ಸಾಗರದಲ್ಲಿ ಮುಳುಗುತ್ತಿದೆ. ಒಂದು ಕಡೆ ಮಳೆರಾಯನ ಆಗಮನ ನಗರಕ್ಕೆ ತಂಪು ತಂದಿದ್ದರೆ, ಇನ್ನೊಂದು ಕಡೆ ಅದೇ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ನಗರದಲ್ಲಿ 170ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, 500ಕ್ಕೂ ಹೆಚ್ಚು ಕೊಂಬೆಗಳು ಮುರಿದು ಬಿದ್ದಿವೆ.
ಜಯನಗರ, ಹನುಮಂತನಗರ, ಶ್ರೀನಗರ, ಡಬಲ್ ರೋಡ್, ಶಾಂತಿನಗರ, ಬಸವನಗುಡಿ, ಜೆಪಿ ನಗರ, ಚಿಕ್ಕಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಮರಗಳು ಬಿದ್ದು ಮೂರು ದಿನ ಕಳೆದರೂ ಇನ್ನೂ ತೆರವು ಕಾರ್ಯ ಸಂಪೂರ್ಣವಾಗಿಲ್ಲ. ವಿಜಯನಗರ 3ನೇ ಬ್ಲಾಕ್ ಮೆನ್ ರೋಡ್ನಲ್ಲಿ ನೇತಾಡುತ್ತಿರುವ ಕೊಂಬೆಗಳು ಹಾಗೂ ಫುಟ್ಪಾತ್ ಮೇಲೆ ಬಿದ್ದಿರುವ ಮರಗಳು ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಅಪಾಯವಾಗಿವೆ.
ವೇಗವಾಗಿ ಬರುವ ವಾಹನಗಳಿಗೆ ಈ ಅಡ್ಡಿಗಳು ಕೊನೆಯ ಕ್ಷಣದಲ್ಲಿ ಮಾತ್ರ ಕಾಣಿಸುತ್ತಿದ್ದು ಅಪಘಾತದ ಭೀತಿ ಹೆಚ್ಚಿಸಿದೆ. ಕೆಲವೆಡೆ ಕಾರ್ಯಾರಂಭಿಸಿದ ನಗರಪಾಲಿಕೆ ಅಧಿಕಾರಿಗಳು ಮಧ್ಯದಲ್ಲೇ ಕೆಲಸ ನಿಲ್ಲಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ವ್ಯಾಪಾರಿಗಳಿಗೆ ಇದರಿಂದ ನಷ್ಟ ಉಂಟಾಗುತ್ತಿದೆ ಎಂಬುದು ಅವರ ಆಕ್ರೋಶ.
ಗುರುವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಗಾಳಿಯ ಪರಿಣಾಮವಾಗಿ ಮರಗಳು ನಿರಂತರವಾಗಿ ಉರುಳಿಬೀಳುತ್ತಿದ್ದು, ನಗರದ ಜನರು ಭಯಭೀತರಾಗಿದ್ದಾರೆ. ಕೇವಲ ಎರಡು ಗಂಟೆಗಳ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದ್ದು, ಅಂಡರ್ಪಾಸ್ಗಳಲ್ಲಿ ನೀರು ತುಂಬಿ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೇ ದಿನದಲ್ಲಿ 40ಕ್ಕೂ ಹೆಚ್ಚು ವಾಹನಗಳು ಹಾನಿಗೀಡಾಗಿವೆ. ಜಯನಗರದಲ್ಲಿ ಬೃಹತ್ ಮರ ಲೈಟ್ ಕಂಬದ ಮೇಲೆ ಬಿದ್ದು ಮೂರು ಕಂಬಗಳು ಧರೆಗೆ ಉರುಳಿದ ಪರಿಣಾಮ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ನಗರಪಾಲಿಕೆ ಕಂಟ್ರೋಲ್ ರೂಂಗೆ ನಿತ್ಯ ನೂರಾರು ಕರೆಗಳು ಬರುತ್ತಿದ್ದರೂ, ಕೆಲವೇ ಪ್ರಕರಣಗಳಲ್ಲಿ ಮಾತ್ರ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂಬುದು ಸ್ವತಃ ನಗರಪಾಲಿಕೆಯ ಮಾಹಿತಿಯಿಂದಲೇ ಬಹಿರಂಗವಾಗಿದೆ.
ಮರಗಳನ್ನು ಅರ್ಧಮಧ್ಯದಲ್ಲಿ ತೆರವು ಮಾಡಿ ಫುಟ್ಪಾತ್ಗಳಲ್ಲೇ ಬಿಟ್ಟು ಹೋಗುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರತೀ ಮಳೆಗಾಲದಲ್ಲೂ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಭರವಸೆ ನೀಡಲಾಗುತ್ತಿದೆಯಾದರೂ, ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ಇದೀಗ ಹವಾಮಾನ ಇಲಾಖೆ ಇನ್ನೂ ಮೂರು ದಿನ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, “ಇನ್ನೇನು ಆಗುತ್ತೋ?” ಎಂಬ ಆತಂಕದಲ್ಲಿ ನಗರದ ಜನರು ಬದುಕುತ್ತಿದ್ದಾರೆ.
ಇದನ್ನೂ ಓದಿ : ‘ಸರ್ಕಾರಿ ನೌಕರರ ಮೇಲೆ ನಂಬಿಕೆಯಿರಲಿ’ : ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ TMCಗೆ ಹಿನ್ನಡೆ!



















