ಬೆಂಗಳೂರು : ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲಿ 81 ರನ್ ಸಿಡಿಸಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ, ತಮ್ಮ ಅಮೋಘ ಪ್ರದರ್ಶನಕ್ಕಿಂತಲೂ ಮಿಗಿಲಾಗಿ ಯುವ ಆಟಗಾರ ದೇವದತ್ ಪಡಿಕ್ಕಲ್ ಅವರ ಸ್ಪೋಟಕ ಬ್ಯಾಟಿಂಗ್ ಅನ್ನು ಕೊಂಡಾಡಿದ್ದು, ಕ್ರೀಡಾಭಿಮಾನಿಗಳ ಮನಗೆದ್ದಿದೆ.
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಪಡಿಕ್ಕಲ್ ಅವರೇ ಆರ್ಸಿಬಿ ಗೆಲುವಿನ ನಿಜವಾದ ಹೀರೊ ಎಂದು ಬಣ್ಣಿಸಿದ್ದಾರೆ. ಗುಜರಾತ್ ಟೈಟಾನ್ಸ್ ನೀಡಿದ್ದ 206 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಆರ್ಸಿಬಿ ತಂಡವು ಆರಂಭದಲ್ಲಿಯೇ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾದ ಅನಿವಾರ್ಯತೆಯಲ್ಲಿತ್ತು. ಆದರೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದೇವದತ್ ಪಡಿಕ್ಕಲ್, ಒಟ್ಟು 27 ಎಸೆತಗಳಲ್ಲಿ 55 ರನ್ ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಸಂಪೂರ್ಣವಾಗಿ ಬದಲಿಸಿದರು.
ರಶೀದ್ ಖಾನ್ ಅವರ ಬೌಲಿಂಗ್ನಲ್ಲಿ ಔಟ್ ಆಗುವ ಮುನ್ನ ಪಡಿಕ್ಕಲ್, ವಿರಾಟ್ ಕೊಹ್ಲಿ ಅವರೊಂದಿಗೆ ಎರಡನೇ ವಿಕೆಟ್ಗೆ 115 ರನ್ಗಳ ನಿರ್ಣಾಯಕ ಜೊತೆಯಾಟವಾಡಿದರು. ಈ ಜೊತೆಯಾಟವೇ ಬೃಹತ್ ಗುರಿಯನ್ನು ಸುಲಭವಾಗಿ ತಲುಪಲು ಆರ್ಸಿಬಿಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಪಡಿಕ್ಕಲ್ ಅವರ ಈ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕೊಹ್ಲಿ, “ಪಂದ್ಯದ ಆರಂಭದಲ್ಲಿ ಪಿಚ್ ಮತ್ತು ಪರಿಸ್ಥಿತಿಯನ್ನು ಅರಿಯುವುದು ನಮಗೆ ಅತ್ಯಗತ್ಯವಾಗಿತ್ತು.
ಅಂತಹ ಸಮಯದಲ್ಲಿ ದೇವದತ್ ಪಡಿಕ್ಕಲ್ ಆಡಿದ ಇನ್ನಿಂಗ್ಸ್ ಪಂದ್ಯದ ಸ್ಪಷ್ಟ ವ್ಯತ್ಯಾಸವನ್ನು ಹುಟ್ಟುಹಾಕಿತು. ಈ ಋತುವಿನಲ್ಲಿ ಪಡಿಕ್ಕಲ್ ಈಗಾಗಲೇ ಎರಡು ಬಾರಿ ಇಂತಹ ಅಮೋಘ ಆಟವಾಡಿದ್ದಾರೆ. ಇದು ನಿಜಕ್ಕೂ ಅಪರೂಪದ ಸಾಧನೆ. ಅವರೊಟ್ಟಿಗಿನ ಜೊತೆಯಾಟವೇ ಇಡೀ ಪಂದ್ಯದ ಗೇಮ್ ಚೇಂಜರ್ ಆಗಿತ್ತು” ಎಂದು ಪ್ರಶಂಸಿದರು. ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಪಡಿಕ್ಕಲ್ 26 ಎಸೆತಗಳಲ್ಲಿ 61 ರನ್ ಸಿಡಿಸಿ ಕೊಹ್ಲಿ ಜೊತೆ 101 ರನ್ಗಳ ಜೊತೆಯಾಟವಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಿಸ್ತು ತುಂಬಿದ ಪ್ರದರ್ಶನ
ಬ್ಯಾಟಿಂಗ್ ವಿಭಾಗದ ಯಶಸ್ಸಿನ ಜೊತೆಗೆ ಆರ್ಸಿಬಿ ಬೌಲರ್ಗಳ ಶಿಸ್ತುಬದ್ಧ ಪ್ರದರ್ಶನವನ್ನೂ ಕೊಹ್ಲಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನ 16ನೇ ಓವರ್ ಮುಕ್ತಾಯದ ವೇಳೆಗೆ 170 ರನ್ ಕಲೆಹಾಕಿ, ಸುಲಭವಾಗಿ 230 ರಿಂದ 235 ರನ್ಗಳ ಬೃಹತ್ ಮೊತ್ತ ಪೇರಿಸುವ ಉತ್ಸಾಹದಲ್ಲಿತ್ತು. ಆದರೆ ಡೆತ್ ಓವರ್ಗಳಲ್ಲಿ ಅದ್ಭುತವಾಗಿ ಪುಟಿದೆದ್ದ ಆರ್ಸಿಬಿ ಬೌಲರ್ಗಳು 16 ರಿಂದ 19ನೇ ಓವರ್ವರೆಗಿನ ಮೂರು ಓವರ್ಗಳಲ್ಲಿ ಕೇವಲ 17 ರನ್ ಮಾತ್ರ ಬಿಟ್ಟುಕೊಟ್ಟರು. ಅಂತಿಮ ಓವರ್ನಲ್ಲಿ ಕೃಣಾಲ್ ಪಾಂಡ್ಯ 18 ರನ್ ನೀಡಿದರೂ, ಅಲ್ಲಿಯವರೆಗಿನ ಬೌಲರ್ಗಳ ಕರಾರುವಾಕ್ ದಾಳಿಯು ಗುಜರಾತ್ ತಂಡದ ಮೊತ್ತವನ್ನು ಮಿತಿಯಲ್ಲಿಡುವಲ್ಲಿ ಯಶಸ್ವಿಯಾಯಿತು. “ಬೌಲಿಂಗ್ ಇನ್ನಿಂಗ್ಸ್ನಲ್ಲಿಯೂ ನಮ್ಮ ಬೌಲರ್ಗಳು ಅದ್ಭುತವಾಗಿ ಕಮ್ ಬ್ಯಾಕ್ ಮಾಡಿದರು. ಒಂದು ಹಂತದಲ್ಲಿ ಗುಜರಾತ್ 230-235 ರನ್ ಗಳಿಸುವಂತೆ ತೋರುತ್ತಿತ್ತು. ಆದರೆ ಬೌಲರ್ಗಳು ಅದನ್ನು ನಿಯಂತ್ರಿಸಿದರು” ಎಂದು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪಿದರು ಮತ್ತು ಸ್ವಲ್ಪ ಅದೃಷ್ಟದ ಬೆಂಬಲವನ್ನೂ ಪಡೆದರು. ಆರ್ಸಿಬಿ ಇನ್ನಿಂಗ್ಸ್ನ ಮೊದಲ ಓವರ್ನಲ್ಲಿಯೇ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ವಾಷಿಂಗ್ಟನ್ ಸುಂದರ್ ಅವರು ಕೊಹ್ಲಿಯ ಸುಲಭ ಕ್ಯಾಚ್ ಕೈಚೆಲ್ಲಿದರು. ಈ ಜೀವದಾನದ ಸಂಪೂರ್ಣ ಲಾಭ ಪಡೆದ ಕೊಹ್ಲಿ, ಗುಜರಾತ್ ಬೌಲರ್ಗಳನ್ನು ದಂಡಿಸಿದರು. ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ 300 ಸಿಕ್ಸರ್ಗಳನ್ನು ಸಿಡಿಸಿದ ಸಾಧನೆ ಮಾಡಿದ ಅವರು, ಟೂರ್ನಿಯಲ್ಲಿ 9,000 ರನ್ಗಳ ಗಡಿ ದಾಟುವ ಮೊದಲ ಬ್ಯಾಟರ್ ಎನಿಸಿಕೊಳ್ಳಲು ಕೇವಲ 11 ರನ್ಗಳ ಹಿಂದಿದ್ದಾರೆ. ಈ ಮಹತ್ವದ ಗೆಲುವಿನೊಂದಿಗೆ, ಆಡಿರುವ ಏಳು ಪಂದ್ಯಗಳಲ್ಲಿ ಐದನ್ನು ಗೆದ್ದಿರುವ ಆರ್ಸಿಬಿ ಒಟ್ಟು 10 ಅಂಕಗಳು ಮತ್ತು +1.101 ನೆಟ್ ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿ ತನ್ನ ಪ್ಲೇ-ಆಫ್ ಆಸೆಗಳನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಇದನ್ನೂ ಓದಿ : ಐಪಿಎಲ್ ಪ್ಲೇ ಆಫ್ ದಿ ಡೇ – ಡೆತ್ ಓವರ್ಗಳಲ್ಲಿ ಆರ್ಸಿಬಿ ಬೌಲರ್ಗಳ ಕಮಾಲ್!


















