ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯದ ಪ್ರಗತಿ ನಿರೀಕ್ಷಿತ ಮಟ್ಟಕ್ಕೆ ತಲುಪದೇ ನಿಧಾನಗತಿಯಲ್ಲಿರುವುದು ಗಮನಕ್ಕೆ ಬಂದಿದೆ. ಈ ಕಾರ್ಯಕ್ಕೆ ಒಟ್ಟು 23,500 ಗಣತಿಗಾರರು ಹಾಗೂ 2,900 ಮೇಲ್ವಿಚಾರಕರು ನಿಯೋಜಿತರಾಗಿದ್ದರೂ, ಸುಮಾರು 6,000 ಸಿಬ್ಬಂದಿ ಅನುಮತಿಯಿಲ್ಲದೆ ಗೈರಾಗಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.
ಗೈರಾಗಿರುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ಗಳನ್ನು ಜಾರಿ ಮಾಡಲಾಗಿದ್ದು, ದಿನನಿತ್ಯ ಎಸ್ಎಂಎಸ್ ಹಾಗೂ ದೂರವಾಣಿ ಕರೆಗಳ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಆದರೂ ಕೂಡ ತಕ್ಷಣ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಬಿಎ ವಿಶೇಷ ಆಯುಕ್ತ ಮೌನಿಷ್ ಮೌದ್ಗಿಲ್ ಎಚ್ಚರಿಸಿದ್ದಾರೆ.
ಇದಲ್ಲದೆ, ಕರ್ತವ್ಯ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗೆ “ಕೆಲಸ ಇಲ್ಲ–ವೇತನ ಇಲ್ಲ” (No Work–No Pay) ನಿಯಮ ಜಾರಿಗೊಳಿಸಲಾಗುವುದು. ಜೊತೆಗೆ ಸೇವೆ ವ್ಯತ್ಯಯ (Break-in-Service) ಆದೇಶ ಹೊರಡಿಸಲಾಗುವುದಲ್ಲದೆ, ಗಂಭೀರ ನಿರ್ಲಕ್ಷ್ಯ ತೋರಿದವರ ವಿರುದ್ಧ ಎಫ್ಐಆರ್ ದಾಖಲಿಸುವ ಕ್ರಮಕ್ಕೂ ಮುಂದಾಗಲಾಗುವುದು ಎಂದು ತಿಳಿಸಿದ್ದಾರೆ. ಅನುಮತಿಯಿಲ್ಲದೆ ಗೈರಾಗಿರುವ ಎಲ್ಲಾ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದ್ದು,. ಇಲ್ಲವಾದಲ್ಲಿ ಏಪ್ರಿಲ್ 24 ರೊಳಗೆ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಹೇಳಿದ್ಧಾರೆ.
ನಗರಪಾಲಿಕೆಗಳ ಜನಗಣತಿ ಶೇಕಡಾವಾರು :
- ದಕ್ಷಿಣ ನಗರಪಾಲಿಕೆ – 22.5
- ಉತ್ತರ ನಗರಪಾಲಿಕೆ – 29.0
- ಪೂರ್ವ ನಗರಪಾಲಿಕೆ – 7.3
- ಪಶ್ಚಿಮ ನಗರಪಾಲಿಕೆ – 25
- ಕೇಂದ್ರ ನಗರಪಾಲಿಕೆ – 16
ಇದನ್ನೂ ಓದಿ : ದಾಂಡೇಲಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು.. ಇಬ್ಬರು ಸಾವು, ಓರ್ವ ಗಂಭೀರ



















