ಬೆಂಗಳೂರು : ಬೇಸಿಗೆ ಆರಂಭ ಆಗುತ್ತಿದ್ದಂತೆ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಬೆಂಗಳೂರು ಜಲಮಂಡಳಿ ಮಹತ್ವದ ಹೆಜ್ಜೆ ಇಟ್ಟಿದೆ. ನೀರಿನ ಕೊರತೆ ಸಮಯದಲ್ಲಿ ಅಧಿಕ ದರ ವಸೂಲಿ ಮಾಡುವ ಖಾಸಗಿ ಟ್ಯಾಂಕರ್ಗಳಿಗೆ ಬ್ರೇಕ್ ಹಾಕಲು ‘ಸಂಚಾರಿ ಕಾವೇರಿ’ಗೆ ಮತ್ತಷ್ಟು ಒತ್ತು ನೀಡಿದೆ.
ಕಳೆದ ವರ್ಷ ಜಾರಿಗೆ ತಂದಿದ ಈ ಯೋಜನೆಯನ್ನು ಈಗ ಮತ್ತೆ ಜಾರಿ ಮಾಡಿ ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕಿದೆ. ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ಲೈನ್ ಮೂಲಕ ಮನೆ ಬಾಗಿಲಿಗೆ ಸಿಗುತ್ತಿರುವಂತೆಯೇ, ಇದೀಗ ಕುಡಿಯುವ ನೀರೂ ಆ್ಯಪ್ ಮೂಲಕವೇ ಮನೆಗೆ ತಲುಪುವ ವ್ಯವಸ್ಥೆ ಮತ್ತೆ ಜಾರಿಗೆ ಬಂದಿದೆ. ಈ ಯೋಜನೆಯಡಿ ನಾಗರಿಕರು ತಮ್ಮ ಮೊಬೈಲ್ ಆ್ಯಪ್ ಮೂಲಕವೇ ಬೇಕಾದಷ್ಟು ಕಾವೇರಿ ನೀರನ್ನು ಬುಕ್ ಮಾಡಿ ಮನೆ ಬಾಗಿಲಿಗೆ ಪಡೆಯಬಹುದು.
ಯೋಜನೆಯ ಮುಖ್ಯಾಂಶಗಳು:
- ಆ್ಯಪ್ ಆಧಾರಿತ ನೀರು ಪೂರೈಕೆ ಸೇವೆ.
- ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ನೇರ ಸರಬರಾಜು.
- 500ಕ್ಕೂ ಹೆಚ್ಚು ಟ್ಯಾಂಕರ್ಗಳ ಬಳಕೆ.
- 4,000 ರಿಂದ 12,000 ಲೀಟರ್ವರೆಗೆ ಪೂರೈಕೆ.
- ಆನ್ಲೈನ್ ಅಥವಾ ನಗದು ಪಾವತಿ ಸೌಲಭ್ಯ.
- ಮಧ್ಯವರ್ತಿಗಳಿಲ್ಲ – ನೇರವಾಗಿ ಜಲಮಂಡಳಿಯಿಂದ ನೀರು
- ರಿಯಾಯಿತಿ ದರದಲ್ಲಿ ಪೂರೈಕೆ.
- ಜನರಿಗೆ ಅನುಕೂಲ, ಟ್ಯಾಂಕರ್ ಮಾಫಿಯಾಗೆ ಕಡಿವಾಣ.
ದರ ವಿವರ:
4,000 ಲೀಟರ್ – ₹660
5,000 ಲೀಟರ್ – ₹700
6,000 ಲೀಟರ್ – ₹740
12,000 ಲೀಟರ್ – ₹1,290
ಈ ದರಗಳು ಪ್ರಾರಂಭಿಕ 2 ಕಿಲೋಮೀಟರ್ ವ್ಯಾಪ್ತಿಗೆ ಅನ್ವಯಿಸುತ್ತವೆ. 4,000–6,000 ಲೀಟರ್ ಟ್ಯಾಂಕರ್ಗಳಿಗೆ 2 ಕಿಮೀ ನಂತರ ಪ್ರತಿ ಕಿಮೀಗೆ ₹50
12,000 ಲೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಟ್ಯಾಂಕರ್ಗಳಿಗೆ 2 ಕಿಮೀ ನಂತರ ಪ್ರತಿ ಕಿಮೀಗೆ ₹70 ತೆಗದುಕೊಳ್ಳಲಾಗುತ್ತದೆ. ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ, ಈ ಯೋಜನೆಯಿಂದ ನೀರಿನ ಕೊರತೆ ಸಂದರ್ಭದಲ್ಲಿ ಜನರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ನೀರು ಲಭ್ಯವಾಗುವ ನಿರೀಕ್ಷೆಯಿದ್ದು, ಟ್ಯಾಂಕರ್ ಮಾಫಿಯಾದ ಮೇಲಿನ ಅವಲಂಬನೆ ಕಡಿಮೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಅಫ್ಘಾನಿಸ್ತಾನ ಕ್ರಿಕೆಟಿಗ ಶಾಪೂರ್ ಜದ್ರಾನ್ ಸಾವು-ಬದುಕಿನ ಮಧ್ಯೆ ಹೋರಾಟ!



















