ಶಿವಮೊಗ್ಗ : ಬರ್ತ್ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಸಚಿನ್ (21) ಎಂದು ಗುರುತಿಸಲಾಗಿದೆ. ಗ್ರಾಮಸ್ಥರೊಬ್ಬರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವಾರ (ಏ.17) ರಾತ್ರಿ ಗ್ರಾಮದ ಹೊರವಲಯದ ನಿರ್ಮಾಣ ಹಂತದ ಮನೆಯೊಂದರ ಬಳಿ ನಾನ್ ವೆಜ್ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವೇಳೆ ಸಚಿನ್, ಊಟ ಮುಗಿಸಿಕೊಂಡು ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದ್ದ ನಿರ್ಮಾಣ ಹಂತದ ಮನೆಯೊಳಗೆ ತೆರಳಿದ್ದನು. ಊಟದ ಬಳಿಕ ಉಳಿದವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾಗಿದ್ದರು.
ಶುಕ್ರವಾರ (ಏ.18) ಮುಂಜಾನೆ ಕಾಮಗಾರಿ ಮುಂದುವರಿಸಲು ಕೆಲಸಗಾರರು ಕಟ್ಟಡದ ಬಳಿ ಬಂದಾಗ, ಸಚಿನ್ ಅಲ್ಲಿ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಮೃತ ಸಚಿನ್ ಮದ್ಯಪಾನ ಮಾಡಿದ್ದ. ಆತನ ಗಂಟಲಲ್ಲಿ ಆಹಾರ ಸಿಲುಕಿಕೊಂಡಿದ್ದೇ ಈ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಇದನ್ನೂ ಓದಿ : ಕರ್ನಾಟಕ ಹೈಕೋರ್ಟ್ನಲ್ಲಿ 90 ಸಿವಿಲ್ ನ್ಯಾಯಾಧೀಶರ ನೇಮಕಾತಿ : 1.36 ಲಕ್ಷ ರೂ. ಸಂಬಳ


















