ಉಡುಪಿ : ಮಣಿಪಾಲದಲ್ಲಿ ನಡೆದ ಅಪಹರಣ ಪ್ರಕರಣವನ್ನು ಪೊಲೀಸರು ಭೇದಿಸಿ, ತೆಲಂಗಾಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ರಮಾನಾಥ ಶ್ರೀನು(30), ಮೋಹನ್ ರಮವಾತ್(22), ಪರಮೇಶ್(30), ಪಾಲ್ಯಾ ವಿಜಯ್(25) ಬಂಧಿತ ಆರೋಪಿಗಳು.
ಮಾರ್ಚ್ 31ರಂದು ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆ ಬಳಿ ಟೀ ಕುಡಿಯುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ 7-8 ಮಂದಿ, ರಾಜೇಶ್ ಎಂಬವರನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯ ಗೋವಿಂದಪಳ್ಳಿ ಪ್ರದೇಶದ ಲಾಡ್ಜ್ಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಅಪಹರಣಕ್ಕೆ ಬಳಸಿದ ಕಿಯಾ ಕಾರು ಹಾಗೂ ಮಹೀಂದ್ರ ಥಾರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರಲಾಗಿದೆ.
ಇದನ್ನೂ ಓದಿ : ಶಿವಮೊಗ್ಗ : ಬೈಕ್ ಅಪಘಾತ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿ – ಹಲವರಿಗೆ ಗಾಯ



















