ಮುಂಬೈ: ಬಾಲಿವುಡ್ನ ಖ್ಯಾತ ಹಾಗೂ ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ (ಆರ್ಜಿವಿ) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಭಾರತದ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾರಣದಿಂದಲೇ ಇಂದು ನಾನು ಬದುಕು ಸಾಗಿಸುತ್ತಿದ್ದೇನೆ ಎಂದು ಹೇಳುವ ಮೂಲಕ ವರ್ಮಾ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ತಮ್ಮ ವೃತ್ತಿಜೀವನದ ಐಕಾನಿಕ್ ಚಿತ್ರಗಳಾದ ‘ಸತ್ಯ’ ಮತ್ತು ‘ಕಂಪನಿ’ ನಿರ್ಮಾಣವಾಗಲು ಭೂಗತ ಲೋಕದ ನೈಜ ಘಟನೆಗಳೇ ಸ್ಫೂರ್ತಿ ಎಂದಿದ್ದಾರೆ. “ನನ್ನ ಆತ್ಮಚರಿತ್ರೆ ‘ಗನ್ಸ್ ಅಂಡ್ ಥೈಸ್’ ಅನ್ನು ನಾನು ದಾವೂದ್ ಇಬ್ರಾಹಿಂಗೆ ಅರ್ಪಿಸಲು ಬಯಸಿದ್ದೆ, ಆದರೆ ಪ್ರಕಾಶಕರು ಅವನ ಹೆಸರನ್ನು ತೆಗೆದುಹಾಕಿದರು. ದಾವೂದ್ ಇಲ್ಲದಿದ್ದರೆ ‘ಸತ್ಯ’ ಅಥವಾ ‘ಕಂಪನಿ’ಯಂತಹ ಸಿನಿಮಾಗಳು ಹುಟ್ಟುತ್ತಿರಲಿಲ್ಲ. ಆತನಿಗಲ್ಲದೆ ಇನ್ಯಾರಿಗೆ ನಾನು ಕೃತಜ್ಞತೆ ಸಲ್ಲಿಸಲಿ? ಇಂದು ನಾನು ಹಣ ಗಳಿಸಿ ಜೀವನ ನಡೆಸುತ್ತಿರುವುದು ಅವನಿಂದಲೇ,” ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಅಂಡರ್ವರ್ಲ್ಡ್ನಿಂದ ಬೆದರಿಕೆ ಕರೆ ಬರದಿರಲು ಕಾರಣವೇನು?
ಬಾಲಿವುಡ್ನ ಹಲವು ಗಣ್ಯರಿಗೆ ಭೂಗತ ಲೋಕದಿಂದ ಬೆದರಿಕೆ ಕರೆಗಳು ಬರುವುದು ಸಾಮಾನ್ಯ. ಆದರೆ ತಮಗೆ ಅಂತಹ ಯಾವುದೇ ಕರೆಗಳು ಬಂದಿಲ್ಲ ಎಂದು ವರ್ಮಾ ಬಹಿರಂಗಪಡಿಸಿದ್ದಾರೆ. “ದಾವೂದ್ ಮತ್ತು ಅವನ ತಂಡದವರು ನನ್ನ ‘ಸತ್ಯ’ ಮತ್ತು ‘ಕಂಪನಿ’ ಚಿತ್ರಗಳನ್ನು ನೋಡಿ ಇಷ್ಟಪಟ್ಟಿದ್ದರು. ನಾನು ಅವರ ‘ಸೋಲ್ ಮೇಟ್’ (ಆತ್ಮೀಯ ಸಂಗಾತಿ) ಎಂಬಂತಾಗಿದ್ದೆ. ನನ್ನ ಸಿನಿಮಾಗಳನ್ನು ಅವರು ಅತಿಯಾಗಿ ಪ್ರೀತಿಸುತ್ತಿದ್ದ ಕಾರಣ, ಅವರು ನನಗೆ ಎಂದಿಗೂ ತೊಂದರೆ ಕೊಡಲು ಬಯಸಲಿಲ್ಲ,” ಎಂದು ಆರ್.ಜಿ.ವಿ ವಿವರಿಸಿದ್ದಾರೆ.
ಶಿಕ್ಷಕರ ದಿನದಂದೂ ದಾವೂದ್ಗೆ ಸಲಾಂ!
ಈ ಹಿಂದೆಯೂ ವರ್ಮಾ ದಾವೂದ್ ಇಬ್ರಾಹಿಂನನ್ನು ತಮ್ಮ ‘ಸ್ಫೂರ್ತಿ’ ಎಂದು ಕರೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್, ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಶ್ರೀದೇವಿ ಅವರಂತಹ ದಿಗ್ಗಜರ ಜೊತೆಗೆ ದಾವೂದ್ ಹೆಸರನ್ನೂ ಉಲ್ಲೇಖಿಸಿ “ನಾನು ಇಂದು ಏನಾಗಿದ್ದೇನೋ ಅದಕ್ಕೆ ನೀವೆಲ್ಲರೂ ಕಾರಣ” ಎಂದು ಪೋಸ್ಟ್ ಹಾಕಿದ್ದರು. ಸದ್ಯ ವರ್ಮಾ ‘ಸರ್ಕಾರ್ 4’ ಮತ್ತು ‘ಸಿಂಡಿಕೇಟ್’ ಚಿತ್ರಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಭೂಗತ ಲೋಕದ ವಿಷಯಗಳನ್ನು ತೆರೆಯ ಮೇಲೆ ಅದ್ಭುತವಾಗಿ ಚಿತ್ರಿಸುವ ವರ್ಮಾ, ನಿಜ ಜೀವನದಲ್ಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಂಚಲನ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: ‘ಸ್ವರ ಸಾಮ್ರಾಜ್ಞಿ’ ಆಶಾ ಭೋಂಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ



















