ಟೆಹ್ರಾನ್ : ಕದನ ವಿರಾಮ ಒಪ್ಪಂದಕ್ಕೆ ಒಪ್ಪಲು ಮತ್ತು ಹೊರ್ಮುಜ್ ಜಲಸಂಧಿ ತೆರೆಯಲು ಇರಾನ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಗಡುವು ಸಮೀಪಿಸುತ್ತಿರುವಂತೆಯೇ ಮಧ್ಯಪ್ರಾಚ್ಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಒಪ್ಪಂದಕ್ಕೆ ಒಪ್ಪದೇ ಇದ್ದರೆ ಇರಾನ್ನ ಪ್ರಮುಖ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಧ್ವಂಸಗೊಳಿಸುವುದಾಗಿ ಟ್ರಂಪ್ ಈಗಾಗಲೇ ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಪ್ರತಿಯಾಗಿ ಇರಾನ್ ಸರ್ಕಾರವು ‘ಮಾನವ ಸರಪಳಿ’ ನಿರ್ಮಿಸುವ ಮೂಲಕ ಮೂಲಸೌಕರ್ಯಗಳನ್ನು ರಕ್ಷಿಸುವಂತೆ ತನ್ನ ದೇಶದ ಯುವಜನತೆಗೆ ಕರೆ ನೀಡಿದೆ. ಹೊರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶಪಡಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. “ನಾಳೆ ರಾತ್ರಿಯೊಳಗೆ ಇರಾನ್ನ ಪ್ರತಿಯೊಂದು ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳು ಸ್ಫೋಟಗೊಂಡು ಉರಿಯಲಿವೆ,” ಎಂದು ಅವರು ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಸಿದ್ದಾರೆ.
ಈ ದಾಳಿಯನ್ನು ಯುದ್ಧಾಪರಾಧ ಎಂದು ಪರಿಗಣಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, “ಇಲ್ಲ, ಇರಾನ್ನ ಜನರೇ ಸ್ವಾತಂತ್ರ್ಯಕ್ಕಾಗಿ ಈ ಸಂಕಷ್ಟವನ್ನು ಸಹಿಸಿಕೊಳ್ಳಲು ಸಿದ್ಧರಿದ್ದಾರೆ” ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಕಾಲಮಾನದಂತೆ ಬುಧವಾರ ಮುಂಜಾನೆ 5:30ಕ್ಕೆ ಟ್ರಂಪ್ ನೀಡಿದ ಗಡುವು ಕೊನೆಗೊಳ್ಳಲಿದೆ.
ರಕ್ಷಣೆಗೆ ನಿಂತ ಇರಾನ್ ಯುವಶಕ್ತಿ
ಅಮೆರಿಕದ ದಾಳಿ ಭೀತಿಯ ಹಿನ್ನೆಲೆಯಲ್ಲಿ ಇರಾನ್ನ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವಾಲಯವು ದೇಶದ ವಿದ್ಯುತ್ ಸ್ಥಾವರಗಳ ಸುತ್ತ ‘ಮಾನವ ಸರಪಳಿ’ ನಿರ್ಮಿಸಲು ನಿರ್ಧರಿಸಿದೆ. ಮಂಗಳವಾರ ಮಧ್ಯಾಹ್ನ 2:00 ಗಂಟೆಯಿಂದ ವಿದ್ಯಾರ್ಥಿಗಳು, ಕಲಾವಿದರು ಮತ್ತು ಕ್ರೀಡಾಪಟುಗಳು ಈ ತಾಣಗಳ ಸುತ್ತ ಒಟ್ಟುಗೂಡಲಿದ್ದಾರೆ. ಇದನ್ನು “ಉಜ್ವಲ ಭವಿಷ್ಯಕ್ಕಾಗಿ ಇರಾನ್ ಯುವಜನತೆಯ ಮಾನವ ಸರಪಳಿ” ಎಂದು ಹೆಸರಿಸಲಾಗಿದ್ದು, ದೇಶದ ಮೂಲಸೌಕರ್ಯಗಳನ್ನು ರಕ್ಷಿಸುವ ಬದ್ಧತೆಯನ್ನು ಜಗತ್ತಿಗೆ ಪ್ರದರ್ಶಿಸಲು ಇರಾನ್ ಈ ತಂತ್ರ ರೂಪಿಸಿದೆ.
ಸಂಧಾನ ಸಭೆಗಳ ವೈಫಲ್ಯ
ಇತ್ತೀಚೆಗಷ್ಟೇ ಅಮೆರಿಕ ಪ್ರಸ್ತಾಪಿಸಿದ್ದ 45 ದಿನಗಳ ಕದನ ವಿರಾಮ ಒಪ್ಪಂದವನ್ನು ಇರಾನ್ ತಿರಸ್ಕರಿಸಿದೆ. “ನಮಗೆ ಶಾಶ್ವತವಾಗಿ ಯುದ್ಧ ಕೊನೆಗೊಳ್ಳಬೇಕು ಮತ್ತು ಮತ್ತೊಮ್ಮೆ ನಮ್ಮ ಮೇಲೆ ದಾಳಿ ನಡೆಯುವುದಿಲ್ಲ ಎಂಬ ಖಾತರಿ ಬೇಕು” ಎಂದು ಇರಾನ್ ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಇರಾನ್ ತನ್ನದೇ ಆದ 10 ಅಂಶಗಳ ಬೇಡಿಕೆಯನ್ನು ಅಮೆರಿಕದ ಮುಂದಿಟ್ಟಿದೆ. ಟ್ರಂಪ್ ಆಡಳಿತವು ಈ ಹಿಂದೆ ಮಾತುಕತೆಯ ನಡುವೆಯೇ ಎರಡು ಬಾರಿ ಬಾಂಬ್ ದಾಳಿ ನಡೆಸಿದ್ದರಿಂದ ಅಮೆರಿಕದ ಮೇಲೆ ನಂಬಿಕೆ ಇಲ್ಲ ಎಂದು ಇರಾನ್ ಹೇಳಿದೆ.
ಇಸ್ರೇಲ್ ಕೂಡ ಇರಾನ್ನ ಪೆಟ್ರೋಲಿಯಂ ಸ್ಥಾವರಗಳ ಮೇಲೆ ದಾಳಿ ನಡೆಸಿ ಒತ್ತಡವನ್ನು ಹೆಚ್ಚಿಸುತ್ತಿದ್ದು, ಟ್ರಂಪ್ ಅವರ ಗಡುವು ಮುಗಿಯುವ ಹೊತ್ತಿಗೆ ಪರಿಸ್ಥಿತಿ ಯಾವ ತಿರುವು ಪಡೆಯಲಿದೆ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ದಿನಾಂಕ ಫಿಕ್ಸ್.. ಇಲ್ಲಿದೆ ಸಂಪೂರ್ಣ ಮಾಹಿತಿ!


















