ಹೈದರಾಬಾದ್ : ಕೌಟುಂಬಿಕ ಕಲಹ ಹಾಗೂ ಪತಿಯ 2ನೇ ಮದುವೆಯಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿ, ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದ್ನಲ್ಲಿ ಮಂಗಳವಾರ ನಡೆದಿದೆ. ದೀರ್ಘಕಾಲದ ಕೌಟುಂಬಿಕ ಕಿರುಕುಳ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಎಸ್. ಬನೋತ್ ಸ್ರವಂತಿ (29) ಮತ್ತು ಆಕೆಯ ಮಕ್ಕಳಾದ ಕಾರ್ತಿಕ್ (12) ಹಾಗೂ ಕೌಶಿಕ್ (10) ಎಂದು ಗುರುತಿಸಲಾಗಿದೆ.
ಸ್ರವಂತಿ ಅವರು ಸುಮಾರು 13 ವರ್ಷಗಳ ಹಿಂದೆ ಬೋಡಾ ಪ್ರವೀಣ್ ಎಂಬವರನ್ನು ವಿವಾಹವಾಗಿದ್ದರು. ಆರಂಭದಲ್ಲಿ ಸುಸೂತ್ರವಾಗಿದ್ದ ಇವರ ಸಂಸಾರದಲ್ಲಿ, ಪ್ರವೀಣ್ ಮತ್ತೊಬ್ಬ ಮಹಿಳೆಯನ್ನು ವಿವಾಹವಾದ ನಂತರ ಬಿರುಕು ಮೂಡಿತ್ತು. ಈ ವಿಚಾರವಾಗಿ ದಂಪತಿಗಳ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಸ್ರವಂತಿ ಇತ್ತೀಚೆಗಷ್ಟೇ ಮಕ್ಕಳೊಂದಿಗೆ ವಾರಂಗಲ್ನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು. ಆದರೆ, ಕುಟುಂಬದ ಹಿರಿಯರು ಮಧ್ಯಪ್ರವೇಶಿಸಿ ಸಂಧಾನ ನಡೆಸಿದ ನಂತರ, ಸೋಮವಾರ ರಾತ್ರಿಯಷ್ಟೇ ಸ್ರವಂತಿ ಪತಿಯೊಂದಿಗೆ ಹೈದರಾಬಾದ್ಗೆ ಮರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಗಿಲು ಮುರಿದು ಒಳಹೋದಾಗ ಕಂಡಿತು ಭೀಕರ ದೃಶ್ಯ
ಮಂಗಳವಾರ ಮಧ್ಯಾಹ್ನ ಸುಮಾರು 1:30ರ ಸುಮಾರಿಗೆ ಪ್ರವೀಣ್ ಕೆಲಸ ಮುಗಿಸಿ ಮನೆಗೆ ಬಂದಾಗ, ಮನೆಯ ಮುಖ್ಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ನೆರೆಹೊರೆಯವರ ಸಹಾಯದೊಂದಿಗೆ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಸ್ರವಂತಿ ಹಾಗೂ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಮಧ್ಯಾಹ್ನ 2:30ರ ಸುಮಾರಿಗೆ ಈ ಬಗ್ಗೆ ಮಾಹಿತಿ ಪಡೆದ ಬಾಲಾನಗರ ಎಸಿಪಿ ಪಿ. ನರೇಶ್ ರೆಡ್ಡಿ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಪತಿಯ ವಿರುದ್ಧ ಪ್ರಕರಣ ದಾಖಲು
ಪ್ರಾಥಮಿಕ ತನಿಖೆಯ ಪ್ರಕಾರ, ಸ್ರವಂತಿ ಅವರು ಮಕ್ಕಳನ್ನು ಕೊಂದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಕ್ಕಳ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಲಿದೆ. “ನಾವು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ,” ಎಂದು ಎಸಿಪಿ ನರೇಶ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ : ಯುದ್ಧದಿಂದ ಅಮೆರಿಕ ಹಿಂದೆ ಸರಿಯುವ ಮುನ್ಸೂಚನೆ.. ಇಸ್ರೇಲ್ನಿಂದ ದಾಳಿ ಮುಂದುವರಿಸುವ ಪ್ರತಿಜ್ಞೆ!



















