ಉಡುಪಿ: ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿಯಲ್ಲಿ ಜಾನುವಾರು ಕಳವು ಹಾಗೂ ಬೆದರಿಕೆ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿ ಕೋಕಾ ಕಾಯ್ದೆಯಡಿ ಕ್ರಮ ಕೈಗೊಂಡಿದ್ದಾರೆ.
ಕಳೆದ 2025ರ ಸೆ. 29 ರಂದು ರಾತ್ರಿ ಸುಮಾರು 2.15 ಗಂಟೆಗೆ ಆರೋಪಿಗಳು ಜಯಶ್ರೀ ಪೂಜಾರಿಯವರ ಮನೆಯ ಹಟ್ಟಿಗೆ ನುಗ್ಗಿ, ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ವೇಳೆ, ಎಚ್ಚರಗೊಂಡು ಬಂದ ಮನೆಯವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾರೆ. ನಂತರ ಹಟ್ಟಿಯಲ್ಲಿದ್ದ 3 ಜಾನುವಾರುಗಳ ಹಗ್ಗಗಳನ್ನು ಕತ್ತರಿಸಿ ವಾಹನದಲ್ಲಿ ಕೊಂಡೊಯ್ದು ವಧೆ ಮಾಡಿರುವುದಾಗಿ ದೂರಲಾಗಿತ್ತು.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಕಾರ್ಕಳ ಸಿಪಿಐ ಅವರು ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29), ನಾಸಿರ್ ಅಲಿಯಾಸ್ ಮೊಹಮ್ಮದ್ ನಾಸಿರ್ (28)ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.
ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತವಾಗಿ ಕೃತ್ಯ ನಡೆಸಿರುವುದು ಬೆಳಕಿಗೆ ಬಂದ ಹಿನ್ನೆಲೆ, ಇವರ ವಿರುದ್ಧ ಕೋಕಾ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲಾಗಿದೆ. ಜಾಮೀನು ರದ್ದುಪಡಿಸಿ, ಯೂನಿಸ್, ನಾಸಿರ್ ಹಾಗೂ ಶೌಕತ್ ಆಲಿಯನ್ನು ಮರುಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ಗಂಗಾವತಿಯಲ್ಲಿ ಸೈಕೋ ಕಳ್ಳ.. ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಕದಿಯೋ ಖದೀಮ



















