ಬೆಂಗಳೂರು : ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ಆವೃತ್ತಿಯ ನಾಯಕರ ಸುದ್ದಿಗೋಷ್ಠಿಯಲ್ಲಿ ಲಾಹೋರ್ ಕಲಂದರ್ಸ್ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ ಪತ್ರಕರ್ತರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನ ಮತ್ತು ನಾಯಕತ್ವದ ಬದಲಾವಣೆಯ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ಅಫ್ರಿದಿ ಸಿಟ್ಟಿನಿಂದಲೇ ಉತ್ತರ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಲಾಹೋರ್ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಪಾಕಿಸ್ತಾನ ಟಿ20 ತಂಡದ ನಾಯಕತ್ವ ಬದಲಾವಣೆ ಮತ್ತು ತಂಡದ ವೈಫಲ್ಯದ ಬಗ್ಗೆ ಶಾಹೀನ್ ಅಫ್ರಿದಿಯನ್ನು ಪ್ರಶ್ನಿಸಿದರು. ಇದರಿಂದ ಕೆರಳಿದ ವೇಗಿ, “ಪಾಕಿಸ್ತಾನ ತಂಡದ ಬಗ್ಗೆ ಕೇಳಬೇಡಿ. ನಾವು ಈಗ ಪಿಎಸ್ಎಲ್ ಆಡುತ್ತಿದ್ದೇವೆ, ಹಾಗಾಗಿ ಲೀಗ್ ಬಗ್ಗೆ ಮಾತ್ರ ಪ್ರಶ್ನೆ ಕೇಳಿ. ನಾವು ಯಾವಾಗ ಪಾಕಿಸ್ತಾನ ತಂಡಕ್ಕಾಗಿ ಆಡುತ್ತೇವೆಯೋ ಆಗ ಈ ಪ್ರಶ್ನೆಗಳನ್ನು ಕೇಳಿ, ಆಗ ನಾನು ಉತ್ತರಿಸುತ್ತೇನೆ” ಎಂದು ಖಡಕ್ ಆಗಿ ಹೇಳಿದರು. ಪಾಕಿಸ್ತಾನ ತಂಡವು ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದರಿಂದ ಪತ್ರಕರ್ತರು ಆಟಗಾರರನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಡೇವಿಡ್ ವಾರ್ನರ್ ವ್ಯಂಗ್ಯ ಮತ್ತು ಶಿಸ್ತಿನ ಪಾಠ
ಇದೇ ಸುದ್ದಿಗೋಷ್ಠಿಯಲ್ಲಿ ಮತ್ತೊಂದು ಸ್ವಾರಸ್ಯಕರ ಘಟನೆ ನಡೆಯಿತು. ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮಾತನಾಡುತ್ತಿದ್ದಾಗ ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಮತ್ತು ಮಾರ್ನಸ್ ಲಬುಶೇನ್ ತಮ್ಮಲ್ಲೇ ಗುಸುಗುಸು ಮಾತನಾಡುತ್ತಾ ನಗುತ್ತಿದ್ದರು. ಇದರಿಂದ ಅಸಮಾಧಾನಗೊಂಡ ವಾರ್ನರ್, “ಏನಾಗಿದೆ ಇಲ್ಲಿ? ಕ್ಷಮಿಸಿ, ಇಲ್ಲಿ ಕೆಲವು ಶಾಲಾ ಮಕ್ಕಳಿದ್ದಾರೆ (School kids) ಎಂದು ಅನಿಸುತ್ತದೆ” ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ಅವರಿಗೆ ಶಿಸ್ತಿನ ಪಾಠ ಮಾಡಿದರು. ವಾರ್ನರ್ ಅವರ ಈ ಹಾಸ್ಯಭರಿತ ಗದರಿಕೆ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಭದ್ರತಾ ಕಾರಣಕ್ಕೆ ಖಾಲಿ ಕ್ರೀಡಾಂಗಣದಲ್ಲಿ ಪಿಎಸ್ಎಲ್
ಈ ಬಾರಿಯ ಪಿಎಸ್ಎಲ್ ಟೂರ್ನಿಯು ಭದ್ರತಾ ಕಾರಣಗಳಿಂದಾಗಿ ಪ್ರೇಕ್ಷಕರಿಲ್ಲದೆ (Behind closed doors) ನಡೆಯಲಿದೆ ಎಂದು ಪಿಸಿಬಿ ಅಧ್ಯಕ್ಷರು ತಿಳಿಸಿದ್ದಾರೆ. ವಿದೇಶಿ ಆಟಗಾರರ ಸುರಕ್ಷತೆ ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾರ್ಚ್ 26 ರಿಂದ ಟೂರ್ನಿ ಆರಂಭವಾಗಲಿದ್ದು, ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಪಂದ್ಯಗಳು ಜರುಗಲಿವೆ. ಪೇಶಾವರದ ಅಭಿಮಾನಿಗಳಿಗೆ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ನೀಡಲು ಸಾಧ್ಯವಾಗದಿದ್ದಕ್ಕೆ ಪಿಸಿಬಿ ಕ್ಷಮೆಯಾಚಿಸಿದೆ.
ಇದನ್ನೂ ಓದಿ : ಚಿಕ್ಕಮಗಳೂರು ಎಸ್ಪಿ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಕಿಡಿಗೇಡಿ!



















