ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಯಾವಾಗಲೂ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ 2026ರ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿಗಳಾದ ಜೋಶ್ ಹೇಜಲ್ವುಡ್ ಮತ್ತು ಯಶ್ ದಯಾಳ್ ಅಲಭ್ಯತೆ ತಂಡದ ಸಮತೋಲನವನ್ನು ಕದಡುವ ಸಾಧ್ಯತೆಯಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವಿಶ್ಲೇಷಕ ಆಕಾಶ್ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾದ ಅನುಭವಿ ವೇಗಿ ಜೋಶ್ ಹೇಜಲ್ವುಡ್, ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಟೂರ್ನಿಯ ಆರಂಭಿಕ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಕಳೆದ ಬಾರಿ 12 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೇಜಲ್ವುಡ್ ಗೈರು ಮೊದಲ ಹಂತದಲ್ಲಿ ಆರ್ಸಿಬಿಗೆ ಕಾಡಲಿದೆ. ಇದಕ್ಕಿಂತಲೂ ದೊಡ್ಡ ಹೊಡೆತವೆಂದರೆ ಎಡಗೈ ವೇಗಿ ಯಶ್ ದಯಾಳ್ ಅವರ ಅನುಪಸ್ಥಿತಿ. ವೈಯಕ್ತಿಕ ಕಾರಣಗಳಿಂದಾಗಿ ದಯಾಳ್ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಕಳೆದ ಸೀಸನ್ನಲ್ಲಿ ಡೆತ್ ಓವರ್ಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಅವರು, ಮಹೇಂದ್ರ ಸಿಂಗ್ ಧೋನಿಯವರಂತಹ ದೈತ್ಯ ಬ್ಯಾಟರ್ಗಳನ್ನೇ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.
ಬೌಲಿಂಗ್ ವಿಭಾಗದ ಮೇಲಿನ ಒತ್ತಡ
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆರ್ಸಿಬಿ ತಂಡದ ಬೌಲಿಂಗ್ ಬಗ್ಗೆ ವಿಶ್ಲೇಷಣೆ ನಡೆಸಿರುವ ಆಕಾಶ್ ಚೋಪ್ರಾ, “ಈ ಬಾರಿ ಆರ್ಸಿಬಿ ಬೌಲಿಂಗ್ ವಿಭಾಗದಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಹೇಜಲ್ವುಡ್ ಮತ್ತು ದಯಾಳ್ ಇಲ್ಲದಿರುವುದು ಉಳಿದ ಬೌಲರ್ಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ,” ಎಂದು ಹೇಳಿದ್ದಾರೆ. ಕೃಣಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಕಳೆದ ವರ್ಷ ಅಮೋಘವಾಗಿ ಬೌಲಿಂಗ್ ಮಾಡಿದ್ದರೂ, ಅದನ್ನು ಈ ಬಾರಿಯೂ ಮುಂದುವರಿಸುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. ಈಗ ತಂಡದ ಬೌಲಿಂಗ್ ಹೊಣೆಗಾರಿಕೆ ಪ್ರಮುಖವಾಗಿ ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಅವರ ಹೆಗಲ ಮೇಲಿದೆ. ಭುವನೇಶ್ವರ್ ಕುಮಾರ್ ಈ ಬಾರಿ ಆರ್ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್ ಆಗಬಹುದು ಎಂಬ ಭವಿಷ್ಯವನ್ನೂ ಚೋಪ್ರಾ ನುಡಿದಿದ್ದಾರೆ.
ಮಂಗೇಶ್ ಯಾದವ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಯಶ್ ದಯಾಳ್ ಅವರ ಬದಲಿಯಾಗಿ ಮಧ್ಯಪ್ರದೇಶದ ಯುವ ಎಡಗೈ ಆಲ್ ರೌಂಡರ್ ಮಂಗೇಶ್ ಯಾದವ್ ಅವರನ್ನು ಆರ್ಸಿಬಿ 5.20 ಕೋಟಿ ರೂಪಾಯಿ ನೀಡಿ ಹರಾಜಿನಲ್ಲಿ ಖರೀದಿಸಿದೆ. ಎಡಗೈ ವೇಗಿಯಾಗಿರುವ ಮಂಗೇಶ್ ತಂಡಕ್ಕೆ ಸಮತೋಲನ ತರುವ ನಿರೀಕ್ಷೆಯಿದೆ. ಆದರೆ, ಹೊಸಬರಾಗಿರುವ ಮಂಗೇಶ್ ಅವರು ಅನುಭವಿ ಯಶ್ ದಯಾಳ್ ನೀಡುತ್ತಿದ್ದ ಪ್ರಭಾವವನ್ನು ತಕ್ಷಣವೇ ನೀಡಲು ಸಾಧ್ಯವೇ ಎನ್ನುವ ಸಂಶಯವನ್ನೂ ಚೋಪ್ರಾ ವ್ಯಕ್ತಪಡಿಸಿದ್ದಾರೆ. ಮಾರ್ಚ್ 28 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್ಸಿಬಿ ಯಾವ ಬೌಲಿಂಗ್ ಸಂಯೋಜನೆಯೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಹೊಸ ಅವತಾರದಲ್ಲಿ ಪೃಥ್ವಿ ಶಾ : ಟೀಮ್ ಇಂಡಿಯಾ ಕದ ತಟ್ಟಲು ಸಜ್ಜಾದ ಯುವ ಬ್ಯಾಟರ್



















