ಬೆಂಗಳೂರು: ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ. ಹೈವೇಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದ ಟಿಟಿ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ವಾಹನದಲ್ಲಿದ್ದ 13 ಮಂದಿ ಪೈಕಿ ಜಯಮ್ಮ (60), ಯಶೋದಮ್ಮ (60) ಹಾಗೂ ಗಂಗಾ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಟಿಟಿ ವಾಹನ ಚಾಲಕ ಸೇರಿ 8 ಮಂದಿ ಗಾಯಗೊಂಡಿದ್ದು, ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕೆಂಪಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೂಲಗಳ ಪ್ರಕಾರ, ತಿಪಟೂರಿನಿಂದ 12 ಮಂದಿ ಒಂದೇ ಏರಿಯಾದವರು 15 ದಿನಗಳ ಪ್ರವಾಸಕ್ಕಾಗಿ ಕಾಶಿಗೆ ತೆರಳಲು ಯೋಜನೆ ಮಾಡಿದ್ದರು. ಬೆಳಗ್ಗೆ 6 ಗಂಟೆಯ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿಕೊಂಡಿದ್ದ ತಂಡ, ರಾತ್ರಿ 10 ಗಂಟೆ ಸುಮಾರಿಗೆ ಟಿಟಿ ವಾಹನದಲ್ಲಿ ಕೆಂಪೇಗೌಡ ಏರ್ಪೋರ್ಟ್ ಕಡೆ ಪ್ರಯಾಣ ಆರಂಭಿಸಿತ್ತು.
ಏರ್ಪೋರ್ಟ್ ಟರ್ಮಿನಲ್ ದಾರಿಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಚಾಲಕ ಗೂಗಲ್ ಮ್ಯಾಪ್ ಬಳಸಿ ವಾಹನ ಚಲಾಯಿಸುತ್ತಿದ್ದ. ಅಪಘಾತ ಸ್ಥಳದ ಹಿಂದೆಯೇ ಸರ್ವೀಸ್ ರಸ್ತೆಗೆ ತಿರುಗುವ ಅವಕಾಶ ಇದ್ದರೂ ಅದು ಗಮನಕ್ಕೆ ಬರದೆ ಮುಂದಕ್ಕೆ ಸಾಗಿದ್ದ ವಾಹನ, ಮುಂದಿನ ಟರ್ನಿಂಗ್ನಲ್ಲಿ ಯೂಟರ್ನ್ ತೆಗೆದುಕೊಳ್ಳುವ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಟಿಟಿ ವಾಹನದ ಎಡಭಾಗ ಸಂಪೂರ್ಣ ಜಖಂಗೊಂಡಿದ್ದು, ಸಿಂಗಲ್ ಸೀಟಿನಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ಈ ಕುರಿತು ಸಂಚಾರಿ ವಿಭಾಗದ ಎಸಿಪಿ ಪ್ರದೀಪ್ ಪ್ರತಿಕ್ರಿಯಿಸಿ, “ಚಾಲಕ ಗೂಗಲ್ ಮ್ಯಾಪ್ ನೋಡುತ್ತಾ ಬಂದ ವೇಳೆ ದಾರಿ ತಪ್ಪಿ, ಅಚಾನಕ್ ಸೆಂಟರ್ ಲೈನ್ ಕಡೆ ವಾಹನ ತಿರುಗಿದ್ದಾನೆ. ಈ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಓವರ್ ಸ್ಪೀಡ್ ಕೂಡ ಅಪಘಾತಕ್ಕೆ ಕಾರಣವಾಗಿರಬಹುದು. ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನಿಂತಿದ್ದ ಕ್ಯಾಂಟರ್ಗೆ ಹಿಂಬದಿಯಿಂದ ಗೂಡ್ಸ್ ಟೆಂಪೋ ಗಾಡಿ ಡಿಕ್ಕಿ : ಮೂವರು ಸಾವು



















