ಚೆನ್ನೈ : ಐಪಿಎಲ್ 2026 ಟೂರ್ನಿಯು ಆರಂಭಕ್ಕೂ ಮುನ್ನವೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಬಹುದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಡೆತ್ ಓವರ್ಗಳ ಸ್ಪೆಷಲಿಸ್ಟ್ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ನೇಥನ್ ಎಲ್ಲಿಸ್ ಅವರು ಮಂಡಿರಜ್ಜು ಗಾಯದ ಸಮಸ್ಯೆಯಿಂದಾಗಿ ಮುಂಬರುವ ಸಂಪೂರ್ಣ ಐಪಿಎಲ್ ಸೀಸನ್ನಿಂದ ಹೊರಬಿದ್ದಿದ್ದಾರೆ. ಇದು ರುತುರಾಜ್ ಗಾಯಕ್ವಾಡ್ ನೇತೃತ್ವದ ತಂಡದ ಬೌಲಿಂಗ್ ವಿಭಾಗಕ್ಕೆ ಭಾರಿ ಹಿನ್ನಡೆಯನ್ನು ಉಂಟುಮಾಡಿದೆ.
ಈ ಬಗ್ಗೆ ಫ್ರಾಂಚೈಸಿ ಇನ್ನೂ ಅಧಿಕೃತವಾಗಿ ಪ್ರಕಟಣೆ ಹೊರಡಿಸಿಲ್ಲ. ಆದರೆ, ಸಿಎಸ್ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಅವರು ಗುರುವಾರ (ಮಾರ್ಚ್ 19) ಈ ಸುದ್ದಿಯನ್ನು ಸ್ಪೋರ್ಟ್ಸ್ಟಾರ್ಗೆ ಖಚಿತಪಡಿಸಿದ್ದಾರೆ. ನೇಥನ್ ಎಲ್ಲಿಸ್ ಅವರು ತೀವ್ರತರದ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದು, ಐಪಿಎಲ್ ವೇಳೆಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಇಒ ಕಾಶಿ ವಿಶ್ವನಾಥನ್, “ಖಂಡಿತವಾಗಿಯೂ ಇದು ನಮಗೆ ದೊಡ್ಡ ಹೊಡೆತವಾಗಿದೆ. ಅದರಲ್ಲೂ ಡೆತ್ ಓವರ್ಗಳಲ್ಲಿ ಎಲ್ಲಿಸ್ ನಮ್ಮ ಬಹುಮುಖ್ಯ ಬೌಲರ್ ಆಗಿದ್ದರು. ಅವರ ಅನುಪಸ್ಥಿತಿ ಕಾಡಲಿದ್ದು, ನಾವು ಇದೀಗ ಅವರಿಗೆ ಸೂಕ್ತವಾದ ಪರ್ಯಾಯ ಆಟಗಾರನಿಗಾಗಿ ಡುಕಾಟ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಸಿಎಸ್ಕೆ ಬೌಲಿಂಗ್ ಪಡೆಯ ಮೇಲಿನ ಪರಿಣಾಮ :
ಈ ಬಾರಿಯ ಸೀಸನ್ನಲ್ಲಿ ಸಿಎಸ್ಕೆ ತಂಡದ ಬೌಲಿಂಗ್ ವಿಭಾಗದಲ್ಲಿ ನೇಥನ್ ಎಲ್ಲಿಸ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿತ್ತು. ವೈವಿಧ್ಯಮಯ ಸ್ಲೋವರ್ ಕಟ್ಟರ್ಗಳು ಮತ್ತು ನಿಖರವಾದ ಯಾರ್ಕರ್ಗಳನ್ನು ಬೌಲ್ ಮಾಡುವ ಸಾಮರ್ಥ್ಯ ಹೊಂದಿರುವ ಈ ಆಸ್ಟ್ರೇಲಿಯನ್ ವೇಗಿ, ಪವರ್ಪ್ಲೇ ನಂತರದ ಓವರ್ಗಳಲ್ಲಿ ಹಾಗೂ ಅಂತಿಮ ಓವರ್ಗಳಲ್ಲಿ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕಬಲ್ಲ ಚತುರರಾಗಿದ್ದರು. ಇದೀಗ ಅವರ ಅಲಭ್ಯತೆಯಿಂದಾಗಿ ತಂಡದಲ್ಲಿ ಪರಿಣತ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಕೊರತೆ ಎದ್ದು ಕಾಣುತ್ತಿದೆ.
ಯಾರಿದ್ದಾರೆ ಪರ್ಯಾಯ ಆಯ್ಕೆಗಳು?
ನೇಥನ್ ಎಲ್ಲಿಸ್ ಟೂರ್ನಿಯಿಂದ ಹೊರಬಿದ್ದಿರುವ ಕಾರಣ, ಚೆನ್ನೈ ತಂಡವು ಈಗ ಪವರ್ಪ್ಲೇ ಓವರ್ಗಳಲ್ಲಿ ಎಡಗೈ ವೇಗಿ ಖಲೀಲ್ ಅಹ್ಮದ್ ಮತ್ತು ಮ್ಯಾಟ್ ಹೆನ್ರಿ ಅವರ ಬಲವನ್ನು ಹೆಚ್ಚಾಗಿ ನೆಚ್ಚಿಕೊಳ್ಳಬೇಕಿದೆ. ಇನ್ನು ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ ನೂರ್ ಅಹ್ಮದ್ ಅವರ ಮೇಲೆ ವಿಕೆಟ್ ಕೀಳುವ ಜವಾಬ್ದಾರಿ ಇರಲಿದೆ. ಪ್ರಸ್ತುತ ತಂಡದಲ್ಲಿ ಸ್ಪೆಷಲಿಸ್ಟ್ ಡೆತ್ ಓವರ್ ಬೌಲರ್ ಇಲ್ಲದಿದ್ದರೂ, ಯುವ ವೇಗಿ ಮುಖೇಶ್ ಚೌಧರಿ ಮತ್ತು ಜೇಮೀ ಓವರ್ಟನ್ ಅವರಂತಹ ಬೌಲರ್ಗಳನ್ನು ಬಳಸಿಕೊಳ್ಳುವ ಆಯ್ಕೆ ತಂಡದ ಮುಂದಿದೆ. ಜೊತೆಗೆ ಎಲ್ಲಿಸ್ ಬದಲಿಗೆ ಶೀಘ್ರದಲ್ಲೇ ಮತ್ತೊಬ್ಬ ಸ್ಟಾರ್ ಬೌಲರ್ ತಂಡವನ್ನು ಸೇರುವ ಸಾಧ್ಯತೆಯಿದೆ.
ಸಿಎಸ್ಕೆ ತಂಡದಲ್ಲಿನ ಇತರ ಪ್ರಮುಖ ಬದಲಾವಣೆಗಳು:
ಈ ವರ್ಷದ ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತನ್ನ ಪ್ರಿ-ಸೀಸನ್ ಕ್ಯಾಂಪ್ (ಅಭ್ಯಾಸ ಶಿಬಿರ) ಆರಂಭಿಸಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಯುಗದ ನಂತರದ ಬಹುದೊಡ್ಡ ಪರಿವರ್ತನಾ ಹಂತಕ್ಕೆ ತಂಡವು ಈ ಬಾರಿ ಸಜ್ಜಾಗುತ್ತಿದೆ. ಈ ಬಾರಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರಂತಹ ಸ್ಟಾರ್ ಆಲ್ರೌಂಡರ್ಗಳ ಸೇವೆ ಸಿಎಸ್ಕೆಗೆ ಲಭ್ಯವಿರುವುದಿಲ್ಲ. ಆದಾಗ್ಯೂ, ತಂಡದ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಮ್ಯಾನೇಜ್ಮೆಂಟ್ ಸ್ಪೋಟಕ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಅತ್ಯುತ್ತಮ ಫಾರ್ಮ್ನಲ್ಲಿರುವ ಸಂಜು ಸ್ಯಾಮ್ಸನ್ ಅವರು ನಾಯಕ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ (ಓಪನರ್ ಆಗಿ) ನಿರೀಕ್ಷೆಯಿದೆ.
ಒಟ್ಟಾರೆಯಾಗಿ, ಟೂರ್ನಿಗೂ ಮುನ್ನವೇ ಪ್ರಮುಖ ವೇಗಿಯನ್ನು ಕಳೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಹೊಸ ಆಟಗಾರರೊಂದಿಗೆ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಬೇಕಿದೆ. ಎಲ್ಲಿಸ್ ಬದಲಿಗೆ ಯಾವ ಆಟಗಾರ ಹಳದಿ ಜೆರ್ಸಿ ತೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಇರಾನ್ನಲ್ಲಿ ಕುಸ್ತಿ ಪಟು ಸೇರಿ ಮೂವರು ಪ್ರತಿಭಟನಾಕಾರರಿಗೆ ಸಾರ್ವಜನಿಕ ಗಲ್ಲು!



















