ಬೆಂಗಳೂರು : ಮಾಲೀಕನೊಂದಿಗೆ ಸಂಬಳದ ವಿಚಾರಕ್ಕೆ ಉಂಟಾದ ಗಲಾಟೆ ಹಿನ್ನೆಲೆ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕಳ್ಳತನ ನಡೆಸಿದ ಪ್ರಕರಣವನ್ನು ಗೋವಿಂದಪುರ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಮಗ ಹಾಗೂ ತಂದೆಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಹೇಮಂತ್ (ಮಗ) ಮತ್ತು ಮಂಜುನಾಥ್ (ತಂದೆ) ಎಂದು ಗುರುತಿಸಲಾಗಿದೆ. ಹೇಮಂತ್ ಗೋವಿಂದಪುರದಲ್ಲಿರುವ ನಿತೀಶ್ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕಳೆದ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದನು. ಸಂಬಳದ ವಿಚಾರಕ್ಕೆ ಅಂಗಡಿ ಮಾಲೀಕನೊಂದಿಗೆ ಅವನಿಗೆ ಕಿರಿಕ್ ಉಂಟಾಗಿ ಜಗಳ ನಡೆದಿತ್ತು.
ಜಗಳದ ಬಳಿಕ ಕೆಲಸ ಬಿಟ್ಟ ಹೇಮಂತ್, ಕಳ್ಳತನಕ್ಕೆ ಸಂಚು ರೂಪಿಸಿದ್ದಾನೆ. ತನ್ನ ತಂದೆ ಮಂಜುನಾಥ್ನನ್ನು ಜೊತೆಗಿಸಿಕೊಂಡು ಅಂಗಡಿಗೆ ನುಗ್ಗಿ ಕಳ್ಳತನ ನಡೆಸಿದ್ದಾನೆ ಎನ್ನಲಾಗಿದೆ.
ಆರೋಪಿಗಳು ಅಂಗಡಿಯ ಶಟರ್ ಮುರಿದು ಒಳನುಗ್ಗಿ, ಹೆಚ್ಚು ಮೌಲ್ಯ ಹೊಂದಿದ್ದ ಲ್ಯಾಪ್ಟಾಪ್ಗಳ RAM ಬೋರ್ಡ್ ಹಾಗೂ ಹಾರ್ಡ್ ಡಿಸ್ಕ್ಗಳನ್ನು ಕಳವು ಮಾಡಿದ್ದಾರೆ. ಸುಮಾರು 700 ಲ್ಯಾಪ್ಟಾಪ್ಗಳಿಗೆ ಸಂಬಂಧಿಸಿದ ಭಾಗಗಳನ್ನು ಕದ್ದಿದ್ದು, ಒಟ್ಟು 80 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಲಾಗಿದೆ. ಇದಲ್ಲದೆ, 2.29 ಲಕ್ಷ ರೂಪಾಯಿ ನಗದು ಹಣವೂ ಕಳ್ಳತನ ಮಾಡಲಾಗಿದೆ.
ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಆಲಿಕಲ್ಲು ಮಳೆಗೆ ರಾಜ್ಯವೇ ತತ್ತರ.. ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!



















