ನವದೆಹಲಿ : ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಡುವೆ ಭಾರತಕ್ಕೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಚೀನಾಕ್ಕೆ ಹೋಗಬೇಕಿದ್ದ ರಷ್ಯಾದ ಕನಿಷ್ಠ ಏಳು ಕಚ್ಚಾ ತೈಲ ಟ್ಯಾಂಕರ್ಗಳು ಈಗ ದಾರಿ ಬದಲಿಸಿ ಭಾರತದತ್ತ ಮುಖ ಮಾಡಿವೆ ಎಂದು ವರದಿಯಾಗಿದೆ.
ಹೌದು.. ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್ ಹೊಡೆದು ಮಂಗಳೂರಿನತ್ತ ಬರುತ್ತಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು ಅಕ್ವಾ ಟೈಟಾನ್ ಹಡಗಿಗೆ ಲೋಡ್ ಮಾಡಲಾಗಿತ್ತು. ಈಗ ಈ ಹಡಗು ಯೂಟರ್ನ್ ಹೊಡೆದಿದ್ದು, ಮಾರ್ಚ್ 21ರಂದು ನವಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.
ಭಾರತವು ತನ್ನ ಇಂಧನ ಅಗತ್ಯದ ಶೇ. 90ರಷ್ಟು ಆಮದಿನ ಮೇಲೆ ಅವಲಂಬಿತವಾಗಿದ್ದು, ಹಾರ್ಮುಜ್ ಜಲಸಂಧಿಯ ಮೂಲಕವೇ ದೇಶದ ಶೇ. 40-50 ರಷ್ಟು ಕಚ್ಚಾ ತೈಲ ಮತ್ತು ಎಲ್ಪಿಜಿ ಪೂರೈಕೆಯಾಗುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಎಲ್ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿತ್ತು. ಇದರ ಪರಿಣಾಮವಾಗಿ ಬೆಂಗಳೂರು ಮತ್ತು ಮುಂಬೈನ ಕೆಲವು ರೆಸ್ಟೋರೆಂಟ್ಗಳು ಅಡುಗೆ ಅನಿಲವಿಲ್ಲದೆ ಮುಚ್ಚುವ ಪರಿಸ್ಥಿತಿ ಬಂದಿತ್ತು. ಈಗ ರಷ್ಯಾದಿಂದ ಬರುತ್ತಿರುವ ಈ ಹೆಚ್ಚುವರಿ ತೈಲ ಪೂರೈಕೆಯು ದೇಶದ ಈ ತೀವ್ರ ಇಂಧನ ಬಿಕ್ಕಟ್ಟನ್ನು ನೀಗಿಸಲು ಮುಂದಾಗಲಿದೆ.
ಈಗಾಗಲೇ ಮೂರು ಭಾರತೀಯ ಧ್ವಜ ಹೊಂದಿರುವ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಬಂದರುಗಳನ್ನು ತಲುಪಿವೆ. ಆದರೆ ಇನ್ನೂ ಸುಮಾರು 20 ಹಡಗುಗಳು ಆ ಮಾರ್ಗದಲ್ಲಿ ಅನುಮತಿಗಾಗಿ ಕಾಯುತ್ತಿವೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇತ್ತೀಚೆಗೆ ಹೇಳಿರುವಂತೆ, ಭಾರತೀಯ ಹಡಗುಗಳ ಮುಕ್ತ ಸಂಚಾರಕ್ಕೆ ಇರಾನ್ ಜೊತೆ ಯಾವುದೇ ವಿಶೇಷ ಒಪ್ಪಂದವಿಲ್ಲ. ಈ ಅನಿಶ್ಚಿತತೆಯ ನಡುವೆ ರಷ್ಯಾದಿಂದ ಬರುತ್ತಿರುವ ಈ ಏಳು ಟ್ಯಾಂಕರ್ಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಶಕ್ತಿಯಾಗಲಿವೆ.
ಇದನ್ನೂ ಓದಿ : ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ.. ನವದೆಹಲಿಯಲ್ಲಿ ಸಂಸತ್ ಘೇರಾವ್


















