ಬೆಂಗಳೂರು: ಇಂದು ಮಾರ್ಚ್ 17, ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ. ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿ ಉಳಿದಿರುವ ಅಪ್ಪು ಅವರನ್ನು ಕರುನಾಡಿನ ಅಭಿಮಾನಿಗಳು ಭಾವಪೂರ್ಣವಾಗಿ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನದ ಅಂಗವಾಗಿ ರಾಜ್ಯದ ವಿವಿಧೆಡೆ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಪ್ರತಿ ವರ್ಷ ಮಾರ್ಚ್ 17 ಬಂದರೆ ಸಾಕು, ಇಡೀ ಕರುನಾಡು ಸಂಭ್ರಮದ ವಾತಾವರಣದಲ್ಲಿ ಮುಳುಗುತ್ತದೆ. ಬಾಲನಟನಾಗಿ ಸಿನಿರಂಗ ಪ್ರವೇಶಿಸಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪುನೀತ್ ರಾಜ್ಕುಮಾರ್ ನಂತರ ‘ಪವರ್ ಸ್ಟಾರ್’ ಆಗಿ ಬೆಳೆದ ಅವರ ಪಯಣ ಅತ್ಯಂತ ಸ್ಪೂರ್ತಿದಾಯಕವಾಗಿದೆ.

ಪುನೀತ್ ರಾಜ್ಕುಮಾರ್ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಬಾಲನಟನಾಗಿ ತೆರೆಗೆ ಬಂದರು. 1985ರಲ್ಲಿ ಬಿಡುಗಡೆಯಾದ ‘ಬೆಟ್ಟದ ಹೂವು’ ಚಿತ್ರದಲ್ಲಿನ ರಾಮು ಪಾತ್ರಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತು. ಬಾಲ್ಯದಲ್ಲಿಯೇ ಅವರ ಅಭಿನಯ ಎಲ್ಲರ ಗಮನ ಸೆಳೆದಿತ್ತು.
2002ರಲ್ಲಿ ಬಿಡುಗಡೆಯಾದ ‘ಅಪ್ಪು’ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿತ್ತು. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ನಟಿ ರಕ್ಷಿತಾ ನಡುವಿನ ಕೆಮಿಸ್ಟ್ರಿ ಹಾಗೂ ಪ್ರೇಮಕಥೆ ಅಂದಿನ ಕಾಲದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಚಿತ್ರವು ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು.
ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಸಿನಿಮಾ ‘ಗಂಧದ ಗುಡಿ’ ಆಗಿದ್ದು, ಇದು ಕರ್ನಾಟಕದ ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತಾದ ಅದ್ಭುತ ಸಾಕ್ಷ್ಯಚಿತ್ರವಾಗಿದೆ. ಅವರ ಸಾಧನೆಯನ್ನು ಗೌರವಿಸಿ ಕರ್ನಾಟಕ ಸರ್ಕಾರ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ನೀಡಿ ಗೌರವಿಸಿದೆ.
ನಟನೆ ಹಾಗೂ ನೃತ್ಯದಲ್ಲಷ್ಟೇ ಅಲ್ಲದೆ ಸಮಾಜ ಸೇವೆಯಲ್ಲಿಯೂ ಪುನೀತ್ ರಾಜ್ಕುಮಾರ್ ಹೆಸರುವಾಸಿಯಾಗಿದ್ದರು. ಅವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಲಕ್ಷಾಂತರ ಜನರಿಗೆ ಸಹಾಯಹಸ್ತ ಚಾಚಿದ್ದರು. ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಹಲವರಿಗೆ ನೆರವಾಗಿದ್ದರು.
2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ನಿಧನರಾದರು. ಆಗ ಅವರಿಗೆ 46 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಯಾದರೂ ಅವರು ಮಾಡಿದ ಸಾಧನೆಗಳು ಮತ್ತು ಸಮಾಜ ಸೇವೆ ಕನ್ನಡಿಗರ ಮನದಲ್ಲಿ ಸದಾ ಉಳಿಯಲಿದೆ.



















