ಬೆಂಗಳೂರು | ಮಧ್ಯಪ್ರಾಚ್ಯ ದೇಶಗಳಲ್ಲಿ ಭೀಕರ ಯುದ್ಧದ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆ ಅದರ ಪರಿಣಾಮಗಳು ಇದೀಗ ರಾಜಧಾನಿ ಬೆಂಗಳೂರಿನ ಮೇಲೂ ಕಾಣಿಸಿಕೊಳ್ಳತೊಡಗಿದೆ. ಒಂದೆಡೆ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಅಭಾವ ಕಂಡುಬರುತ್ತಿದ್ದರೆ, ಮತ್ತೊಂದೆಡೆ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಪ್ರವಾಸೋದ್ಯಮಕ್ಕೂ ಯುದ್ಧದ ಭೀತಿ ದೊಡ್ಡ ಹೊಡೆತ ನೀಡಿದೆ.
ಪ್ರತಿ ವರ್ಷ ಶಾಲೆ ಹಾಗೂ ಕಾಲೇಜುಗಳ ಶೈಕ್ಷಣಿಕ ವರ್ಷ ಮುಕ್ತಾಯವಾಗುವ ಸಮಯದಲ್ಲಿ ಹಾಗೂ ರಂಜಾನ್ ತಿಂಗಳ ಅವಧಿಯಲ್ಲಿ ರಾಜ್ಯದ ಸಾವಿರಾರು ಮಂದಿ ಗಲ್ಫ್ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ವಿಶೇಷವಾಗಿ ಸೌದಿ ಅರೇಬಿಯಾ, ಮೆಕ್ಕಾ, ದುಬೈ, ಅಬುದಾಭಿ ಸೇರಿದಂತೆ ಹಲವು ಗಲ್ಫ್ ದೇಶಗಳಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಿದ್ದರು. ಆದರೆ, ಈ ಬಾರಿ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಯುದ್ಧ ಪರಿಸ್ಥಿತಿ ಕಾರಣದಿಂದ ಏರ್ಲೈನ್ಸ್ ಸೇವೆಗಳು ಕಡಿಮೆಯಾಗಿರುವುದರಿಂದ ಜನರು ಗಲ್ಫ್ ಟೂರ್ಗೆ ಮುಂದಾಗುತ್ತಿಲ್ಲ ಎಂದು ಪ್ರವಾಸ ಸಂಸ್ಥೆಗಳ ಮಾಲೀಕರು ತಿಳಿಸಿದ್ದಾರೆ.
ರಂಜಾನ್ ತಿಂಗಳಲ್ಲಿ ಸೌದಿ ಅರೇಬಿಯಾದ ಮೆಕ್ಕಾಗೆ ಉಮ್ರಾ ಯಾತ್ರೆ ಕೈಗೊಳ್ಳುವ ಮುಸ್ಲಿಂ ಬಾಂಧವರ ಸಂಖ್ಯೆಯೂ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಆದರೆ, ಯುದ್ಧದ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಯಾತ್ರೆಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಟ್ರಾವೆಲ್ ಏಜೆನ್ಸಿಗಳು ಹೇಳುತ್ತಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಗಲ್ಫ್ ರಾಷ್ಟ್ರಗಳಿಗೆ ಪ್ರವಾಸಿಗರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಯುದ್ಧ ಭೀತಿ ಇರುವ ಕಾರಣ ಯಾರೂ ಕೂಡ ಗಲ್ಫ್ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ನಗರದ ಸಾವಿರಾರು ಟೂರ್ ಅಂಡ್ ಟ್ರಾವೆಲ್ ಸಂಸ್ಥೆಗಳ ವ್ಯಾಪಾರ ಕೂಡ ಕುಂಠಿತಗೊಂಡಿದೆ.
ಪ್ರವಾಸಿಗರ ಕೊರತೆಯಿಂದಾಗಿ ಏರ್ಲೈನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಕಡಿಮೆಯಾಗಿದೆ. ಯುದ್ಧ ಪರಿಸ್ಥಿತಿ ಶಮನವಾಗುವವರೆಗೆ ಗಲ್ಫ್ ರಾಷ್ಟ್ರಗಳ ಪ್ರವಾಸವನ್ನು ಬಹುತೇಕ ಜನರು ಮುಂದೂಡುತ್ತಿದ್ದಾರೆ. ಇದರಿಂದ ಟ್ರಾವೆಲ್ ಏಜೆನ್ಸಿ ಮಾಲೀಕರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿರುವುದಾಗಿ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಗ್ಯಾಸ್ ಪೂರೈಕೆ ಸಮಸ್ಯೆ ಎದುರಾಗಿರುವುದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ಭಾರೀ ಹೊಡೆತ ಬಿದ್ದಿದ್ದು, ಪರಿಣಾಮ ಬೆಂಗಳೂರಿನ ವ್ಯಾಪಾರ ಚಟುವಟಿಕೆಗಳ ಮೇಲೂ ಪರಿಣಾಮ ಕಾಣಿಸಿಕೊಳ್ಳುತ್ತಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಗೆಲುವಿಗಿಂತ ಏಕದಿನ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಷ್ಠ – ಸಂಜಯ್ ಮಂಜ್ರೇಕರ್ ವಿವಾದಾತ್ಮಕ ಹೇಳಿಕೆ!



















