ಬೆಂಗಳೂರು : ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ತಂಡದ ಮುಖ್ಯ ತರಬೇತುದಾರ ಮೈಕ್ ಹೆಸನ್ ಅವರ ನಡವಳಿಕೆ ಮತ್ತು ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಹಲವಾರು ಹಿರಿಯ ಆಟಗಾರರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ತಂಡದ ಕಳಪೆ ಪ್ರದರ್ಶನದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಪಾಕ್ ಕ್ರಿಕೆಟ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ವರದಿಗಳ ಪ್ರಕಾರ, ಮೈಕ್ ಹೆಸನ್ ಅವರು ತಂಡದ ಪ್ರಮುಖ ವಿಷಯಗಳಲ್ಲಿ ಯಾರನ್ನೂ ಸಮಾಲೋಚಿಸದೆ ಮೊಂಡುತನದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆಟಗಾರರು ಆರೋಪಿಸಿದ್ದಾರೆ. “ತರಬೇತುದಾರರು ಆಟಗಾರರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಮತ್ತು ತಮ್ಮ ನಿರ್ಧಾರಗಳಿಂದಾಗಿ ತಂಡಕ್ಕೆ ಸೋಲಾದಾಗ ಅದರ ಹೊಣೆಯನ್ನು ನಾಯಕ ಮತ್ತು ಆಟಗಾರರ ಮೇಲೆ ಹೊರಿಸುತ್ತಿದ್ದಾರೆ” ಎಂದು ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಜಿಯೋ ಟಿವಿ ಪತ್ರಕರ್ತ ಸೊಹೈಲ್ ಇಮ್ರಾನ್ ತಿಳಿಸಿದ್ದಾರೆ. ಈ ಗೊಂದಲಗಳಿಂದಾಗಿ ತಂಡದ ಆಟಗಾರರು ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ.
ಆಯ್ಕೆ ಸಮಿತಿ ಸದಸ್ಯ ರಾಜೀನಾಮೆ
ಇನ್ನೊಂದೆಡೆ, ಈ ಆಂತರಿಕ ಬಿಕ್ಕಟ್ಟಿನ ನಡುವೆಯೇ ಪಾಕಿಸ್ತಾನ ಪುರುಷರ ಆಯ್ಕೆ ಸಮಿತಿಯ ಸದಸ್ಯ ಅಲೀಮ್ ದಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣ ನೀಡಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಶೇಷವಾಗಿ ಬಾಬರ್ ಅಜಮ್, ಶಾದಾಬ್ ಖಾನ್ ಮತ್ತು ಉಸ್ಮಾನ್ ಖಾನ್ ಅವರ ಆಯ್ಕೆಯನ್ನು ದಾರ್ ವಿರೋಧಿಸಿದ್ದರು ಎನ್ನಲಾಗಿದೆ. ಬಾಬರ್ ಅಜಮ್ ಅವರ ಕಳಪೆ ಫಾರ್ಮ್ ನಡುವೆಯೂ ಅವರಿಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿದ್ದ ಅಲೀಮ್ ದಾರ್, ಮೊಹಮ್ಮದ್ ರಿಜ್ವಾನ್ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಅವರ ಸಲಹೆಗಳನ್ನು ಸಮಿತಿಯು ತಿರಸ್ಕರಿಸಿದ್ದರಿಂದ ಬೇಸತ್ತು 17 ತಿಂಗಳ ಅಧಿಕಾರಾವಧಿಯ ನಂತರ ಅವರು ಹೊರನಡೆದಿದ್ದಾರೆ.
ಐಸಿಸಿ ಟೂರ್ನಿಯ ಇತಿಹಾಸದಲ್ಲಿ ಪಾಕಿಸ್ತಾನ ಸತತ ನಾಲ್ಕನೇ ಬಾರಿಗೆ ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದ್ದರೂ, ಇಂಗ್ಲೆಂಡ್ ವಿರುದ್ಧದ ಸೋಲು ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾದದ್ದು ಪಾಕ್ ತಂಡಕ್ಕೆ ಮುಳುವಾಯಿತು. ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೂ ಸಹ ನೆಟ್ ರನ್ ರೇಟ್ ಆಧಾರದಲ್ಲಿ ತಂಡವು ಟೂರ್ನಿಯಿಂದ ಹೊರಬಿದ್ದಿದೆ.
ಟೂರ್ನಿಯ ಕಳಪೆ ಪ್ರದರ್ಶನಕ್ಕಾಗಿ ಆಟಗಾರರಿಗೆ ಪಿಸಿಬಿ ಭಾರೀ ದಂಡ ವಿಧಿಸಿರುವುದು ಒಂದೆಡೆಯಾದರೆ, ತರಬೇತುದಾರರ ವಿರುದ್ಧದ ದೂರು ಮತ್ತೊಂದೆಡೆ ಪಾಕಿಸ್ತಾನ ಕ್ರಿಕೆಟ್ ಅನ್ನು ಸುಳಿಯೊಳಗೆ ಸಿಲುಕಿಸಿದೆ. ಮೈಕ್ ಹೆಸನ್ ವಿರುದ್ಧದ ಈ ದೂರಿಗೆ ಅಧ್ಯಕ್ಷ ಮೊಹ್ಸಿನ್ ನಖ್ವಿ ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಅಡ್ಡಾದಿಡ್ಡಿ ಕಾರು ಓಡಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ.. ಡ್ರೈವರಗೆ ಹಿಗ್ಗಾಮುಗ್ಗಾ ಥಳಿಸಿದ ಜನ



















