ಬೆಂಗಳೂರು : 2026ರ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ. ಮಾರ್ಚ್ 5ರ ಗುರುವಾರ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಈ ರೋಚಕ ಕಾದಾಟ ನಡೆಯಲಿದೆ. ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ಪಿಚ್ ಕ್ಯುರೇಟರ್ ಜೊತೆ ಸುದೀರ್ಘ ಚರ್ಚೆ ನಡೆಸಿರುವುದು ಮತ್ತು ಪಿಚ್ನ ಸ್ವರೂಪ ಈಗ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮಂಗಳವಾರ ತಡರಾತ್ರಿ ನಡೆದ ತರಬೇತಿ ಅವಧಿಯಲ್ಲಿ ಗಂಭೀರ್ ಅವರು ವಾಂಖೆಡೆ ಪಿಚ್ ಅನ್ನು ಬಹಳ ಹತ್ತಿರದಿಂದ ಪರಿಶೀಲಿಸಿದರು. ಸಾಮಾನ್ಯವಾಗಿ ವಾಂಖೆಡೆ ಮೈದಾನವು ಬ್ಯಾಟಿಂಗ್ ಸ್ನೇಹಿ ಆಗಿರುತ್ತದೆ. ಆದರೆ ಈ ಬಾರಿ ಪಿಚ್ ಮೇಲೆ ಅತಿಯಾದ ಹಸಿರು ಹುಲ್ಲು ಕಂಡುಬಂದಿರುವುದು ಕುತೂಹಲ ಮೂಡಿಸಿದೆ. ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದ ಹುಲ್ಲು ಪಿಚ್ ಮೇಲಿರುವುದು ಗಂಭೀರ್ ಅವರ ಗಮನ ಸೆಳೆದಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಪಿಚ್ ಒಣಗಿ ಬಿರುಕು ಬಿಡದಂತೆ ತಡೆಯಲು ಈ ಹುಲ್ಲನ್ನು ಉಳಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪಂದ್ಯದ ದಿನ ಎಷ್ಟು ಹುಲ್ಲನ್ನು ಕತ್ತರಿಸಲಾಗುತ್ತದೆ ಎಂಬುದು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ.
ಪಿಚ್ ಬಗ್ಗೆ ಅಸಮಾಧಾನ
ಇದೇ ವೇಳೆ, ಗೌತಮ್ ಗಂಭೀರ್ ಅವರು ವಾಂಖೆಡೆ ಪಿಚ್ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಆದರೆ ಈ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಟೈಮ್ಸ್ ಆಫ್ ಇಂಡಿಯಾದ ಹಿರಿಯ ಪತ್ರಕರ್ತ ಗೌರವ್ ಗುಪ್ತಾ ಅವರು ಈ ವರದಿಗಳನ್ನು “ಸುಳ್ಳು ಸುದ್ದಿ” ಎಂದು ಸ್ಪಷ್ಟಪಡಿಸಿದ್ದಾರೆ. ಗಂಭೀರ್ ಅವರು ಕ್ಯುರೇಟರ್ ಜೊತೆ ಸಾಮಾನ್ಯ ಚರ್ಚೆ ನಡೆಸಿದ್ದಾರೆಯೇ ಹೊರತು ಯಾವುದೇ ರೀತಿಯ ಆಕ್ರೋಶ ವ್ಯಕ್ತಪಡಿಸಿಲ್ಲ ಎಂಬುದು ಖಚಿತವಾಗಿದೆ.
ವಿಶೇಷವೆಂದರೆ, ಸೆಮಿಫೈನಲ್ ಪಂದ್ಯಕ್ಕಾಗಿ ಸಿದ್ಧಪಡಿಸಲಾದ ಇದೇ ಪಿಚ್ನಲ್ಲಿ ಟೂರ್ನಿಯ ಗುಂಪು ಹಂತದ ಎರಡು ಪಂದ್ಯಗಳು ಈಗಾಗಲೇ ನಡೆದಿವೆ. ಫೆಬ್ರವರಿ 11 ರಂದು ನಡೆದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಕೆರಿಬಿಯನ್ ಪಡೆ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಸ್ಪಿನ್ನರ್ಗಳು ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಈಗಿನ ಪರಿಸ್ಥಿತಿಗಳು ಮತ್ತು ಹವಾಮಾನವು ಆ ಪಂದ್ಯಕ್ಕಿಂತ ಭಿನ್ನವಾಗಿರುವ ಸಾಧ್ಯತೆಯಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಭರ್ಜರಿ ಜಯದೊಂದಿಗೆ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇತ್ತ ಇಂಗ್ಲೆಂಡ್ ತಂಡವು ಸೂಪರ್-8 ಹಂತದಲ್ಲಿ ಅಜೇಯವಾಗಿ ಉಳಿದು ಸೆಮಿಫೈನಲ್ ಪ್ರವೇಶಿಸಿದೆ. ಸತತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಈ ಎರಡು ದೈತ್ಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಬಾರಿ ಯಾರು ಫೈನಲ್ ತಲುಪಲಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದನ್ನೂ ಓದಿ : GBA ಅಡಿಯಲ್ಲಿ 5 ನಗರ ಪಾಲಿಕೆಗಳ ಬಜೆಟ್ ಸಿದ್ಧತೆ.. BSWMLನಿಂದ 2,794 ಕೋಟಿ ಅನುದಾನಕ್ಕೆ ಬೇಡಿಕೆ!



















