ನವದೆಹಲಿ : ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಉನ್ನತ ನಾಯಕತ್ವಕ್ಕೆ ಇಂದು ದೊಡ್ಡ ಮಟ್ಟದ ಕಾನೂನಾತ್ಮಕ ಜಯ ಸಿಕ್ಕಿದೆ. ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೋಷಮುಕ್ತಗೊಳಿಸಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಯಾವುದೇ ರೀತಿಯ ವ್ಯವಸ್ಥಿತ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಜತೆಗೆ, ಸಿಬಿಐ ತನಿಖಾ ವೈಖರಿಯನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಕೇಂದ್ರ ತನಿಖಾ ದಳದ (ಸಿಬಿಐ) ಕಾರ್ಯವೈಖರಿಯನ್ನು ಕಠಿಣ ಶಬ್ದಗಳಿಂದ ಟೀಕಿಸಿದ್ದಾರೆ. ಕೇವಲ ಊಹೆಗಳ ಆಧಾರದ ಮೇಲೆ ಪಿತೂರಿಯ ಕಥೆಯನ್ನು ಹೆಣೆಯಲು ಸಿಬಿಐ ಪ್ರಯತ್ನಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಮುಖವಾಗಿ, ಆರೋಪಿಗಳನ್ನು ಕ್ಷಮಾದಾನದ ಆಮಿಷವೊಡ್ಡಿ ‘ಅಪ್ರೂವರ್’ (ಮಾಫಿ ಸಾಕ್ಷಿ) ಗಳನ್ನಾಗಿ ಮಾಡಿಕೊಂಡು, ಅವರ ಹೇಳಿಕೆಗಳ ಮೂಲಕವೇ ಪ್ರಕರಣವನ್ನು ಕಟ್ಟಲು ಪ್ರಯತ್ನಿಸಿರುವುದು ತನಿಖಾ ಸಂಸ್ಥೆಯ ವಿಫಲತೆಯನ್ನು ತೋರಿಸುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ನೌಕರ ಕುಲದೀಪ್ ಸಿಂಗ್ ಅವರನ್ನು ಈ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಿದ ಸಿಬಿಐ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸುವುದಾಗಿ ನ್ಯಾಯಾಲಯ ಎಚ್ಚರಿಸಿದೆ. ತನಿಖಾ ಸಂಸ್ಥೆಯ ಇಂತಹ ನಡವಳಿಕೆಯು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಹೇಳಿದೆ.
‘ಸೌತ್ ಗ್ರೂಪ್’ ಪದಬಳಕೆಗೆ ಆಕ್ಷೇಪ
ತನಿಖಾ ಸಂಸ್ಥೆಯು ಕೆಲವು ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಉಲ್ಲೇಖಿಸಲು ಬಳಸಿದ್ದ ‘ಸೌತ್ ಗ್ರೂಪ್’ (South Group) ಎಂಬ ಪದದ ಬಗ್ಗೆಯೂ ನ್ಯಾಯಾಲಯ ಪ್ರಶ್ನೆ ಎತ್ತಿದೆ. ಈ ಪದವನ್ನು ಬಳಸುವ ಹಿಂದೆ ಇದ್ದ ಉದ್ದೇಶವೇನು ಮತ್ತು ಇದನ್ನು ಸೃಷ್ಟಿಸಿದವರು ಯಾರು ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಅಮೆರಿಕದ ನ್ಯಾಯಾಲಯವೊಂದರಲ್ಲಿ ನಡೆದ ಇಂತಹದ್ದೇ ಘಟನೆಯನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ಇಂತಹ ಪದಗಳನ್ನು ಬಳಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಪ್ರಕರಣ?
2021-22ರ ದೆಹಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ನೀಡಿದ ದೂರಿನ ಮೇರೆಗೆ 2022ರಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಪರವಾನಗಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ ಮತ್ತು ಇದರಲ್ಲಿ ಕಿಕ್ಬ್ಯಾಕ್ ಪಡೆಯಲಾಗಿದೆ ಎಂಬುದು ತನಿಖಾ ಸಂಸ್ಥೆಯ ವಾದವಾಗಿತ್ತು. ಈ ಪ್ರಕರಣವು ಎಎಪಿ ನಾಯಕರಿಗೆ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಭಾರಿ ಹಿನ್ನಡೆಯನ್ನು ಉಂಟುಮಾಡಿತ್ತು. ಆದರೆ ಇಂದು ನ್ಯಾಯಾಲಯವು ಎಲ್ಲಾ 23 ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣ ಸಾಬೀತಾಗಿಲ್ಲ ಎಂದು ತೀರ್ಪು ನೀಡುವ ಮೂಲಕ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ ಎಳೆದಿದೆ.
ಇದನ್ನೂ ಓದಿ : ನೈಜೀರಿಯಾ ಪ್ರಜೆಯ ಡ್ರಗ್ ಡಿಲೀಂಗ್ಗೆ ಸಾಥ್ ಕೊಡುತ್ತಿದ್ದ ಲೇಡಿ ಬಂಧನ!



















