ನವದೆಹಲಿ : ಇತ್ತೀಚೆಗೆ ಮುಕ್ತಾಯಗೊಂಡ ‘ಎಐ ಇಂಪ್ಯಾಕ್ಟ್ ಶೃಂಗಸಭೆ‘ಯ (AI Impact Summit) ವಸ್ತುಪ್ರದರ್ಶನದ ವೇದಿಕೆಗೆ ನುಗ್ಗಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣ ಸಂಬಂಧ ಬಂಧಿತರಾದವರ ಸಂಖ್ಯೆ 8ಕ್ಕೇರಿದಂತಾಗಿದೆ.
ಸತತ 20 ಗಂಟೆಗಳ ಕಾಲ ಉದಯ್ ಭಾನು ಅವರನ್ನು ವಿಚಾರಣೆ ನಡೆಸಿದ ದೆಹಲಿ ಪೊಲೀಸರು, ಅವರು ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂಬ ಆರೋಪದ ಮೇಲೆ ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ 4:30ರ ಸುಮಾರಿಗೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಉದಯ್ ಭಾನು ವಿರುದ್ಧ ಕ್ರಿಮಿನಲ್ ಪಿತೂರಿ, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಸಾರ್ವಜನಿಕ ಸೇವಕನಿಗೆ ಹಾನಿ ಉಂಟುಮಾಡಿದ ಮತ್ತು ಉದ್ದೇಶಪೂರ್ವಕ ಅಸಹಕಾರದಂತಹ ಗಂಭೀರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಇದೀಗ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ನ ಅಂತಾರಾಜ್ಯ ಕೋಶಕ್ಕೆ (ISC) ವರ್ಗಾಯಿಸಲಾಗಿದೆ. ಆರೋಪಿಯನ್ನು ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೇಪಾಳದ ‘ಜೆನ್ ಜೀ’ ಪ್ರತಿಭಟನೆ ಮಾದರಿಯ ಸಂಚು?
ನ್ಯಾಯಾಲಯದಲ್ಲಿ ವಾದ ಮಂಡಿಸಿದ ಪೊಲೀಸರು, ಇದೊಂದು ಸಾಮಾನ್ಯ ಪ್ರತಿಭಟನೆಯಲ್ಲ, ಬದಲಾಗಿ ಜಾಗತಿಕ ಗಣ್ಯರ ಸಮ್ಮುಖದಲ್ಲಿ ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶಪೂರ್ವಕ ಪಿತೂರಿ ಎಂದು ಪ್ರತಿಪಾದಿಸಿದ್ದಾರೆ. ಇತ್ತೀಚೆಗೆ ನೇಪಾಳದಲ್ಲಿ ಸರ್ಕಾರವನ್ನು ಉರುಳಿಸಿದ ‘ಜೆನ್ ಜೀ’ (Gen Z) ಪ್ರತಿಭಟನೆಯಿಂದ ಪ್ರೇರಣೆ ಪಡೆದು ಈ ಕೃತ್ಯ ಎಸಗಲಾಗಿದೆ ಎಂದೂ ಆರೋಪಿಸಿದ್ದಾರೆ. ಪ್ರತಿಭಟನಾಕಾರರು ಧರಿಸಿದ್ದ ಟಿ-ಶರ್ಟ್ಗಳ ಮೇಲೆ “ಪಿಎಂ ಈಸ್ ಕಾಂಪ್ರಮೈಸ್ಡ್”, “ಇಂಡಿಯಾ-ಯುಎಸ್ ಟ್ರೇಡ್ ಡೀಲ್” ಮತ್ತು “ಎಪ್ಸ್ಟೀನ್ ಫೈಲ್ಸ್” ಮುಂತಾದ ಬರಹಗಳಿದ್ದವು. ಇವುಗಳ ಮುದ್ರಣಕ್ಕೆ ಯಾರು ಹಣಕಾಸು ಒದಗಿಸಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ಮುಖಾಮುಖಿ ವಿಚಾರಣೆ ಬಳಿಕವಷ್ಟೇ ಈ ಷಡ್ಯಂತ್ರದ ರೂಪುರೇಷೆಗಳು ಬಹಿರಂಗವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲೇ ಇರಲಿಲ್ಲ ಎಂದ ವಕೀಲರು
ಉದಯ್ ಭಾನು ಅವರ ಪರ ವಕೀಲರು ನ್ಯಾಯಾಲಯದಲ್ಲಿ ಪೊಲೀಸರ ವಾದವನ್ನು ತಳ್ಳಿಹಾಕಿದರು. ಉದಯ್ ಅವರು ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅವರು ಪ್ರತಿಭಟನಾ ಸ್ಥಳದಲ್ಲಿ ಹಾಜರಿರಲಿಲ್ಲ ಹಾಗೂ ಯಾರಿಗೂ ಪ್ರತಿಭಟನೆಗೆ ಸಂಬಂಧಿಸಿದ ಯಾವುದೇ ಸೂಚನೆಗಳನ್ನು ನೀಡಿರಲಿಲ್ಲ ಎಂದು ವಾದಿಸಿದ್ದಾರೆ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರತಿಭಟನೆಗಳು ನಡೆಯುವುದು ಸಾಮಾನ್ಯ ಪ್ರಕ್ರಿಯೆ. ಇದು ಭಾರತವು ಒಂದು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ಜಗತ್ತಿಗೆ ತೋರಿಸುತ್ತದೆ ಎಂದು ವಕೀಲರು ವಾದ ಮಂಡಿಸಿದ್ದಾರೆ.
ತಾರಕಕ್ಕೇರಿದ ಕೆಸರೆರಚಾಟ
ಯುವ ಕಾಂಗ್ರೆಸ್ ಮುಖಂಡನ ಬಂಧನವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಬಂಧನವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಶಾಂತಿಯುತ ಪ್ರತಿಭಟನೆ ಮಾಡುವುದಕ್ಕೂ ಸರ್ಕಾರ ಅಡ್ಡಿಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಮತ್ತೊಂದೆಡೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು “ಮಾನಸಿಕ ಅಸ್ವಸ್ಥ” ಎಂದು ಜರಿದಿದ್ದು, ಅವರು ಮುಂದೊಂದು ದಿನ ಸಂಸತ್ತಿಗೂ ಒಳಉಡುಪಿನಲ್ಲಿ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ ಇಲ್ಲದ ಟೀಂ ಇಂಡಿಯಾ ‘ಚೋಕರ್ಸ್’ | ಪಾಕ್ ಆಟಗಾರನ ಅಪಹಾಸ್ಯ


















