ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಬಹುಕಾಲದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. 38 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದ ನೌಕರರಿಗೆ ಭಾಗಶಃ ನಿರಾಳತೆ ದೊರೆತಿದ್ದು, 38 ತಿಂಗಳ ಪೈಕಿ 26 ತಿಂಗಳ ಹಿಂಬಾಕಿ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಆದರೂ ನೌಕರರ ಹೋರಾಟ ಹಿಂಪಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. “ಬೆಂಗಳೂರು ಚಲೋ” ಕರೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ನೌಕರರು ಈಗಾಗಲೇ ರಾಜಧಾನಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದಾರೆ. 11 ಗಂಟೆಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಆರಂಭವಾಗಲಿದೆ.
ಬೆಂಗಳೂರು ಚಲೋ ರದ್ದಾಗುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ. ಒಟ್ಟು ಏಳು ಸಂಘಟನೆಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ ಈಗಾಗಲೇ ಆಂತರಿಕ ಮಾತುಕತೆ ನಡೆಸುತ್ತಿದೆ. ಶುಕ್ರವಾರದ ಮುಷ್ಕರ ಕುರಿತಂತೆ ಇಂದು ಸಂಜೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಏಳು ಸಂಘಟನೆಗಳ ಒಪ್ಪಿಗೆ ಪಡೆದು ಮುಂದಿನ ಹೋರಾಟದ ಬಗ್ಗೆ ಅಂತಿಮ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಮಲಿಂಗರೆಡ್ಡಿ ಹೇಳಿಕೆ:

ಸಾರಿಗೆ ನೌಕರರ ಬೇಡಿಕೆ ಈ ಹಿಂದಿನಿಂದಲೂ ಇತ್ತು. ಅವರು 38 ತಿಂಗಳು ಅಂತಿದ್ರು. ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗ್ಬೇಕಿತ್ತು. ನಾನು ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಎಷ್ಟು ವೇತನ ಪರಿಷ್ಕರಣೆ ಮಾಡಬೇಕು ಅನ್ನೋದು ಸಂಘಟನೆ ಜೊತೆ ಮಾತುಕತೆ ನಡೆಸ್ತೀವಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ : ಇಂದು ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಣಿ ಸಭೆ | ಸರ್ಕಾರದ ವೈಫಲ್ಯ ಕುರಿತು ಚರ್ಚೆ?



















