ದುಬೈ (ಫೆ.17) : ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಠಿಣ ನಿರ್ಧಾರವೊಂದನ್ನು ಕೈಗೊಳ್ಳಲು ಚಿಂತಿಸುತ್ತಿದೆ. ವರದಿಗಳ ಪ್ರಕಾರ, ಭವಿಷ್ಯದ ಜಾಗತಿಕ ಕ್ರಿಕೆಟ್ ಟೂರ್ನಿಗಳನ್ನು ಭಾರತದಿಂದ ಸ್ಥಳಾಂತರಿಸಲು ಐಸಿಸಿ ಗಂಭೀರ ಚಿಂತನೆ ನಡೆಸಿದೆ. ಇದರಿಂದಾಗಿ ಭಾರತ ಆತಿಥ್ಯ ವಹಿಸಬೇಕಿದ್ದ 2029ರ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್ ಕೈತಪ್ಪುವ ಭೀತಿ ಎದುರಾಗಿದೆ.
ಕಳೆದ ವರ್ಷದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಮಿಲಿಟರಿ ಕಾರ್ಯಾಚರಣೆಯ ನಂತರ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಟ್ಟಿದೆ. 2025ರ ಏಷ್ಯಾ ಕಪ್ನಲ್ಲಿ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲೂ ಇದೇ ನಿಲುವು ಮುಂದುವರಿದಿದೆ.
ಐಸಿಸಿ ಮುಂದಿರುವ ಸವಾಲುಗಳು
ಬಿಸಿಸಿಐ ಮತ್ತು ಪಿಸಿಬಿ ಈಗಾಗಲೇ ಐಸಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜಾಗತಿಕ ಟೂರ್ನಿಗಳಲ್ಲಿ ಪರಸ್ಪರರ ದೇಶದಲ್ಲಿ ಆಡದಿರಲು ನಿರ್ಧರಿಸಿವೆ. 2023ರ ಏಕದಿನ ವಿಶ್ವಕಪ್ಗಾಗಿ ಪಾಕಿಸ್ತಾನ ಭಾರತಕ್ಕೆ ಬಂದಿದ್ದರೂ, ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಪರಿಣಾಮವಾಗಿ, ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳವಾದ ಯುಎಇಗೆ ಸ್ಥಳಾಂತರಿಸಬೇಕಾಯಿತು.
ಇದೀಗ ಬಾಂಗ್ಲಾದೇಶ ಕೂಡ ಭದ್ರತಾ ಕಾರಣಗಳನ್ನು ನೀಡಿ ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ಗೆ ಬರಲು ನಿರಾಕರಿಸಿದ್ದು ಐಸಿಸಿ ಪಾಲಿಗೆ ಮತ್ತೊಂದು ತಲೆನೋವಾಗಿದೆ. ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ತಂಡಕ್ಕೆ ಐಸಿಸಿ ಮಣೆ ಹಾಕಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿರುವ ಐಸಿಸಿ, ಲಾಜಿಸ್ಟಿಕ್ ಸಮಸ್ಯೆಗಳನ್ನು ತಪ್ಪಿಸಲು ಟೂರ್ನಿಗಳನ್ನೇ ಭಾರತದಿಂದ ಸ್ಥಳಾಂತರಿಸಲು ಯೋಚಿಸುತ್ತಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮ ‘ದಿ ಏಜ್’ ವರದಿ ಮಾಡಿದೆ.
ಆಸ್ಟ್ರೇಲಿಯಾಗೆ ಒಲಿಯುತ್ತಾ ಆತಿಥ್ಯ?
ಒಂದು ವೇಳೆ ಭಾರತದಿಂದ ಈ ಟೂರ್ನಿಗಳು ಸ್ಥಳಾಂತರಗೊಂಡರೆ, ಆಸ್ಟ್ರೇಲಿಯಾ ಪ್ರಬಲ ಆತಿಥ್ಯದ ರೇಸ್ನಲ್ಲಿ ಮುಂಚೂಣಿಯಲ್ಲಿದೆ ಎಂದು ವರದಿಯಾಗಿದೆ. ಉಪಖಂಡದಲ್ಲಿನ ರಾಜಕೀಯ ಅಸ್ಥಿರತೆ ಐಸಿಸಿಯನ್ನು ಈ ನಿರ್ಧಾರಕ್ಕೆ ತಳ್ಳುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ಚೀನಾ ಸಂಚಿಗೆ AI ಬ್ರೇಕ್ | ಅರುಣಾಚಲ ಗಡಿಯಲ್ಲಿ ಡ್ರ್ಯಾಗನ್ ಪಡೆಯ ಕುತಂತ್ರ ಹತ್ತಿಕ್ಕಿದ ಭಾರತೀಯ ಸೇನೆ!



















