ನವದೆಹಲಿ (ಫೆ. 17) : ಟಿ20 ವಿಶ್ವಕಪ್ ಭರಾಟೆಯ ನಡುವೆಯೇ ಐಪಿಎಲ್ ಅಂಗಳದಿಂದ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ರಾಜಸ್ಥಾನ ರಾಯಲ್ಸ್ (ಆರ್ಆರ್) ತಂಡ ಬೃಹತ್ ಆಫರ್ ನೀಡಿದೆ ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿವೆ. ಮೂಲಗಳ ಪ್ರಕಾರ, ಐಪಿಎಲ್ 2008ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್, ಗಂಭೀರ್ ಅವರನ್ನು ತಂಡದ ಸಿಇಒ ಮತ್ತು ಮೆಂಟರ್ ಆಗಿ ನೇಮಿಸಿಕೊಳ್ಳಲು ಮುಂದಾಗಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕತ್ವದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿದ್ದು, ಬಹುಪಾಲು ಷೇರುದಾರರು ತಮ್ಮ ಪಾಲನ್ನು ಹೊಸ ಮಾಲೀಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಹೊಸ ಆಡಳಿತ ಮಂಡಳಿಯ ಓರ್ವ ಮಾಲೀಕರು ಗಂಭೀರ್ಗೆ ತಂಡದ ಸಿಇಒ ಮತ್ತು ಮೆಂಟರ್ ಹುದ್ದೆಯ ಜೊತೆಗೆ, 2 ರಿಂದ 3 ಶೇಕಡಾ ಪಾಲನ್ನು (Stake) ಸಹ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಲೋಧಾ ಸಮಿತಿ ನಿಯಮ ಅಡ್ಡಿ
ಆದರೆ, ಈ ಆಫರ್ ಸ್ವೀಕರಿಸುವುದು ಗಂಭೀರ್ಗೆ ಅಷ್ಟು ಸುಲಭವಲ್ಲ. ಸುಪ್ರೀಂ ಕೋರ್ಟ್ ನೇಮಿತ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ, ಯಾವುದೇ ವ್ಯಕ್ತಿ ಏಕಕಾಲದಲ್ಲಿ ಎರಡು ಹುದ್ದೆಗಳನ್ನು ನಿರ್ವಹಿಸುವಂತಿಲ್ಲ. ಪ್ರಸ್ತುತ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವುದರಿಂದ, ಅವರು ಐಪಿಎಲ್ ತಂಡದ ಯಾವುದೇ ಹುದ್ದೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಒಂದು ವೇಳೆ ಅವರು ರಾಜಸ್ಥಾನ ರಾಯಲ್ಸ್ ಸೇರಲು ಬಯಸಿದ್ದೇ ಆದಲ್ಲಿ, ಟೀಂ ಇಂಡಿಯಾ ಕೋಚ್ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ.
ಗಂಭೀರ್ ನಿಲುವೇನು?
ಈ ಊಹಾಪೋಹಗಳ ನಡುವೆ ಗಂಭೀರ್ ಆಪ್ತ ಮೂಲಗಳು ಪ್ರತಿಕ್ರಿಯಿಸಿದ್ದು, “ಗಂಭೀರ್ ಸದ್ಯಕ್ಕೆ ಭಾರತ ತಂಡದ ಕೋಚಿಂಗ್ ಬಗ್ಗೆ ಸಂಪೂರ್ಣ ಗಮನ ಹರಿಸಿದ್ದಾರೆ. 2026ರ ಟಿ20 ವಿಶ್ವಕಪ್ ಮತ್ತು 2027ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡುವುದು ಅವರ ಪ್ರಮುಖ ಗುರಿ,” ಎಂದು ಸ್ಪಷ್ಟಪಡಿಸಿವೆ. ಗಂಭೀರ್ ಅವರ ಪ್ರಸ್ತುತ ಒಪ್ಪಂದವು 2027ರ ಏಕದಿನ ವಿಶ್ವಕಪ್ವರೆಗೂ ಚಾಲ್ತಿಯಲ್ಲಿದೆ. ಸದ್ಯ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಇಂತಹ ನಿರ್ಣಾಯಕ ಹಂತದಲ್ಲಿ ಗಂಭೀರ್ ತಂಡವನ್ನು ತೊರೆಯುವುದು ಅನುಮಾನ ಎನ್ನಲಾಗಿದೆ.
ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಮೆಂಟರ್ ಆಗಿ ಯಶಸ್ಸು ಕಂಡಿರುವ ಗಂಭೀರ್, ಐಪಿಎಲ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೆಕೆಆರ್ ತಂಡಕ್ಕೆ ಎರಡು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿರುವ (ನಾಯಕನಾಗಿ ಮತ್ತು ಮೆಂಟರ್ ಆಗಿ) ಹೆಗ್ಗಳಿಕೆ ಅವರದ್ದು. ಆದರೂ, ಸದ್ಯದ ಮಟ್ಟಿಗೆ ಅವರು ರಾಷ್ಟ್ರೀಯ ಕರ್ತವ್ಯಕ್ಕೇ ಮೊದಲ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ ; ಮೈಸೂರು | ರೋಡ್ ರೋಲರ್ ಹತ್ತಿಸಿ ದೋಷಪೂರಿತ 378 ಸೈಲೆನ್ಸರ್ ನಾಶ



















