ಬೆಂಗಳೂರು : ರಾಜ್ಯ ಸರ್ಕಾರವು ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿರುವ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬಡ್ತಿ ಪಟ್ಟಿಯಲ್ಲಿ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್. ನಾಗರಾಜ್ ಅವರ ಹೆಸರೂ ಸೇರಿರುವುದು ಗಂಭೀರ ಆಡಳಿತಾತ್ಮಕ ಎಡವಟ್ಟೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಬಗ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನಿಮ್ಮ ಕಾಂಗ್ರೆಸ್ ಸರ್ಕಾರದ ಅದಕ್ಷತೆ, ಅಸಮರ್ಥತೆ ಈಗ ಯಾವ ಮಟ್ಟಕ್ಕೆ ತಲುಪಿದೆ ಗೊತ್ತಾ? ಎಂದು ಟೀಕಿಸಿದ್ದಾರೆ.
ಹೆಚ್.ಎಲ್. ನಾಗರಾಜ್ ಅವರು ಸೇವೆಯಿಂದ ನಿವೃತ್ತರಾಗಿ ನಂತರ ಸನ್ಯಾಸ ಸ್ವೀಕರಿಸಿ ನಿಶ್ಚಲಾನಂದನಾಥ ಸ್ವಾಮೀಜಿ ಎಂದು ಆಧ್ಯಾತ್ಮಿಕ ಜೀವನ ನಡೆಸುತ್ತಿರುವುದು ತಿಳಿದಿದ್ದರೂ, ಅವರ ಹೆಸರನ್ನು ಸೇವೆಯಲ್ಲಿರುವ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿಸಿ ಪದೋನ್ನತಿ ನೀಡಲಾಗಿದೆ ಎಂದು ಅಶೋಕ್ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಆರ್.ಅಶೋಕ್ ಎಕ್ಸ್ ಪೋಸ್ಟ್ ಏನಿದೆ?
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಸಾಮರ್ಥ್ಯವೇ ಎಂದು ಅವರು ಕಿಡಿಕಾರಿದ್ದಾರೆ. ಫೈಲುಗಳಿಗೆ ಸಹಿ ಮಾಡುವ ಮುನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿರುವ ಅಶೋಕ್, ಸೇವೆಯಲ್ಲಿ ಇರುವವರು ಯಾರು, ನಿವೃತ್ತರಾದವರು ಯಾರು ಎಂಬ ಮೂಲಭೂತ ಮಾಹಿತಿಯೂ ಸರ್ಕಾರಕ್ಕೆ ತಿಳಿದಿಲ್ಲದಿರುವುದು ದುರಂತವೆಂದಿದ್ದಾರೆ.
ಇದು ಕೇವಲ ಒಂದು ಆಕಸ್ಮಿಕ ತಪ್ಪಲ್ಲ, ಆಡಳಿತ ವ್ಯವಸ್ಥೆಯ ಕುಸಿತದ ಸೂಚನೆ ಎಂದು ಅಶೋಕ್ ಆರೋಪಿಸಿದ್ದಾರೆ. ಮುಂದೆಯೂ ಇಂತಹ ಗಂಭೀರ ಎಡವಟ್ಟುಗಳು ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವ ಅಶೋಕ್, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮದುವೆಗೆ ಹೋಗಿದ್ದ ಮಹಿಳೆ ನಿಗೂಢ ನಾಪತ್ತೆ | ಕೆರೆಯ ಬಳಿ ಪತ್ತೆಯಾಯ್ತು ಬಟ್ಟೆ, ಬ್ಯಾಗ್, ಚಪ್ಪಲಿ.. ಪೊಲೀಸರಿಂದ ತೀವ್ರ ಶೋಧ



















