ಬೆಂಗಳೂರು | ಬೆಂಗಳೂರಿನ ಆರ್.ಟಿ ನಗರ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಸಂಸ್ಥಾಪಕನೊಬ್ಬ ಸೊಸೆಗೆ ಲೈಂಗಿಕವಾಗಿ ಪೀಡಿಸಿದ ಆರೋಪ ಕೇಳಿಬಂದಿದೆ.
ಹೌದು.. ನನ್ನ ಆಸೆ ಈಡೇರಿಸು ಎಂದು ಸೊಸೆಗೆ ಮಾವನೇ ಕಿರುಕುಳ ನೀಡಿದ್ದಾನೆ. ಥಣಿಸಂಧ್ರದ ಸ್ಕೂಲ್ ಒಂದರ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಫೌಂಡರ್ ಆಗಿರುವ ಆಕೆಯ ಮಾವ ಕಿರುಕುಳ ನೀಡಿರುವ ಬಗ್ಗೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲ್ಲೋದಾಗಿ ಆರೋಪಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆಯೂ ದೂರಲ್ಲಿ ಉಲ್ಲೇಖಿಸಲಾಗಿದೆ.
2007ರಲ್ಲಿ ಮದುವೆಯಾಗಿದ್ದ ಸಂತ್ರಸ್ತೆಗೆ ಆರಂಭದಲ್ಲಿ ಜೀವನ ಚೆನ್ನಾಗಿಯೇ ಇತ್ತು. ಆದರೆ ಬರ ಬರುತ್ತಾ ಮಾವನ ಕಾಟ ಶುರುವಾಗಿದೆ. 2005ರಲ್ಲಿ ಪತ್ನಿಯ ಸಾವಿನ ಬಳಿಕ ಆರೋಪಿ 2006ರಲ್ಲಿ ಎರಡನೇ ಮದುವೆಯಾಗಿದ್ದ. ಹೀಗಿದ್ದರೂ ಸೊಸೆಯ ಮೇಲೆ ಕಣ್ಣು ಹಾಕಿದ್ದ ಈತ, ಆಕೆಯ ಜೊತೆ ಅನುಚಿತ ವರ್ತನೆ ತೋರಲು ಶುರು ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪಕ್ಕದ ಅಪಾರ್ಟ್ಮೆಂಟ್ನಲ್ಲಿಯೇ ವಾಸವಿದ್ದ ಈತ, ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇರುವ ಸಮಯ ನೋಡಿಕೊಂಡು ಬಂದು ಆಕೆಗೆ ಲೈಂಗಿಕ ದೌರ್ಜನ್ಯ ನೀಡಲಾರಂಭಿಸಿದ್ದ. ಅಸಭ್ಯ ಪದಗಳನ್ನು ಮಾತನಾಡುವ ಜೊತೆಗೆ ಬಲವಂತಾಗಿ ಬಟ್ಟೆ ಬಿಚ್ಚಲು ಯತ್ನಿಸುತ್ತಿದ್ದ. 2020ರಿಂದಲೇ ಮಾವನ ಈ ರೀತಿಯ ವರ್ತನೆಗಳು ಆರಂಭವಾಗಿತ್ತು. ಆದ್ರೆ ಭಯಭೀತಳಾಗಿದ್ದ ಸಂತ್ರಸ್ತೆ ಎಲ್ಲವೂ ಸರಿಹೋಗಬಹುದೆಂದು ಸುಮ್ಮನಿದ್ದಳು. ಆದರೆ ಆಕೆ ಮತ್ಮತು ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಹಿಳೆ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಬಳಿಕ ಅಪಾರ್ಟ್ಮೆಂಟ್ನ ಲಿಫ್ಟ್, ಸ್ಕೂಲ್ ಕ್ಯಾಬಿನ್ನಲ್ಲಿಯೂ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ ಆರೋಪಿಸಲಾಗಿದೆ.
ಮಾವನ ಕಾಟಕ್ಕೆ ಬೇಸತ್ತ ಈಕೆ ಅಂತಿಮವಾಗಿ ವಿಷಯವನ್ನು ಪತಿಗೆ ತಿಳಿಸಿದ್ದು, ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಅವರೂ ಪ್ರಶ್ನಿಸಿದ್ದರು. ಬಳಿಕ ಹಿರಿಯರಿಂದ ಈ ಬಗ್ಗೆ ಬುದ್ಧಿಯನ್ನೂ ಹೇಳಿಸಲಾಗಿತ್ತು. ಕೆಲ ದಿನ ಸುಮ್ಮನಾಗಿದ್ದ ಆರೋಪಿ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾನೆ. ಸೊಸೆಯ ಸೌಂದರ್ಯದ ಬಗ್ಗೆ ಪತ್ರ ಬರೆದು ತಂದು ಆಕೆಯ ಮುಂದೆಯೇ ಓದ್ತಿದ್ದ ಈತ, ಲೈಂಗಿಕ ಕಿರುಕುಳ ನೀಡಿ ನಂತರ ಆ ಪತ್ರವನ್ನ ತಾನೇ ಇಟ್ಟುಕೊಳ್ಳುತ್ತಿದ್ದ. ಇತ್ತೀಚೆಗ ಸಂತ್ರಸ್ತೆಯ ಮೈಕೈ ಮುಟ್ಟಿ ಆರೋಪಿ ಕಿರುಕುಳ ನೀಡಿದ್ದು, ಈ ವೇಳೆ ಆಕೆ ವಿರೋಧ ವ್ಯಕ್ತಪಡಿಸಿದ ಕಾರಣ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಮಾವನ ವಿರುದ್ಧ ಕೊನೆಗೂ ಸೊಸೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ : ಪುತ್ರನ ವಿವಾಹಕ್ಕೆ ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಸಚಿನ್ ತೆಂಡೂಲ್ಕರ್ | ರಾಷ್ಟ್ರಪತಿ, ರಾಹುಲ್ ಗಾಂಧಿಗೂ ಕರೆ!



















