ಬೀದರ್ : ವೇಶ್ಯಾವಾಟಿಕೆಗೆ ಅತ್ತೆಯು ಒತ್ತಾಯಿಸಿದ ಕಾರಣ, ಬೇಸತ್ತ ಗೃಹಿಣಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಬಸ್ ನಿಲ್ದಾಣದ ಸಮೀಪದ ಓಂ ಬಡಾವಣೆಯ ನಿವಾಸದಲ್ಲಿ ನಡೆದಿದೆ.
ಅಂಜನಾಬಾಯಿ ಶೇಖರ್ ಪಾಟೀಲ್ (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಂಜನಾಬಾಯಿ ಭಾಲ್ಕಿ ಮೂಲದವರಾಗಿದ್ದು, 2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಅವರೊಂದಿಗೆ ವಿವಾಹವಾಗಿದ್ದು, 11 ತಿಂಗಳ ಮಗು ಕೂಡ ಇದೆ. ಮದುವೆಯ ನಂತರ ಗಂಡನ ಮನೆಯವರಿಂದ ನಿತ್ಯ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ವೇಶ್ಯಾವಾಟಿಕೆ ಮಾಡಲು ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ನನ್ನ ಮಗಳಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳಬೇಕು ಎಂದು ಹಿಂಸೆ ನೀಡಲಾಗಿದೆ ಎಂದು ಮೃತಳ ತಂದೆ ವಿಜಯಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಈ ತಿಂಗಳ 6ನೇ ತಾರೀಖು ಪ್ರಕರಣ ದಾಖಲಾಗಿದ್ದು, ಮೃತಳ ಗಂಡ ಶೇಖರ್ ಪಾಟೀಲ್ ಸೇರಿ ಮೂವರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬಸವಕಲ್ಯಾಣ ಪೊಲೀಸರು, ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರೀತಿಸಿದ ಯುವತಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯ | ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ



















