ಬೆಂಗಳೂರು : ದೇಶದಲ್ಲಿ ದಿನೇದಿನೆ ಆನ್ ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣ ದುಪ್ಪಟ್ಟು ಮಾಡುತ್ತೇವೆ ಎಂದೋ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ಇಷ್ಟು ಹಣ ಕೊಟ್ಟರೆ ಕೇಸ್ ನಿಂದ ಮುಕ್ತಿ ಮಾಡುತ್ತೇವೆ ಎಂದೋ, ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುತ್ತೇವೆ, ಒಟಿಪಿ ಹೇಳಿ ಎಂದೋ ಜನರನ್ನು ವಂಚನೆ ಮಾಡಲಾಗುತ್ತಿದೆ. ಜಾಗೃತಿ ಮೂಡಿಸಿದರೂ ಜನ ವಂಚನೆಗೆ ಒಳಗಾಗಿ, ಕೋಟ್ಯಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ, ಆನ್ ಲೈನ್ ವಂಚನೆ ಪ್ರಕರಣದ ಸಂತ್ರಸ್ತರಿಗೆ RBI ಬಿಗ್ ರಿಲೀಫ್ ನೀಡಿದೆ.
ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಲವು ಘೋಷಣೆ ಮಾಡಿದ್ದಾರೆ. ಅವುಗಳಲ್ಲಿ, ಡಿಜಿಟಲ್ ವಂಚನೆಗೀಡಾದ ಸಂತ್ರಸ್ತರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುವುದು ಮಹತ್ವದ ಘೋಷಣೆಯಾಗಿದೆ. ಆ ಮೂಲಕ ಆನ್ ಲೈನ್ ನಲ್ಲಿ ಹಣ ಕಳೆದುಕೊಂಡವರಿಗೆ ಈಗ ಸರ್ಕಾರದ ನೆರವು ನೀಡುವುದು ಉದ್ದೇಶವಾಗಿದೆ.
ಆನ್ ಲೈನ್ ಮೂಲಕ ಸಣ್ಣ ಮೊತ್ತದ ವಂಚನೆಯಾದರೆ, ಹಣ ಕಳೆದುಕೊಂಡವರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ. ಬ್ಯಾಂಕ್ ಗಳ ಸಹಯೋಗದಲ್ಲಿ ಇಂತಹದ್ದೊಂದು ಯೋಜನೆ ಜಾರಿಗೆ ತರಲು ಆರ್ ಬಿಐ ಚಿಂತನೆ ನಡೆದಿದೆ. ಹಣ ಕಳೆದುಕೊಂಡವರು ಡಿಜಿಟಲ್ ಮೂಲಕ ಮುಂದಿನ ದಿನಗಳಲ್ಲಿ ಹಣದ ವಹಿವಾಟು ನಡೆಸುವುದಿಲ್ಲ. ಇದನ್ನು ಮನಗಂಡು ಆರ್ ಬಿಐ ಪರಿಹಾರ ಘೋಷಣೆ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.
ಡಿಜಿಟಲ್ ಹಣಕಾಸು ಎಕೋಸಿಸ್ಟಂ ಕಾಪಾಡಲು ಇಂತಹದ್ದೊಂದು ಕ್ರಮವನ್ನು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ಜಾರಿಯ ಕುರಿತು ಸಮಗ್ರ ಚಿತ್ರಣ ದೊರೆಯಲಿದೆ. ಎಷ್ಟು ಮೊತ್ತದ ಹಣ ಕಳೆದುಕೊಂಡವರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂಬುದರ ಕುರಿತು ಆರ್ ಬಿಐ ಮಾಹಿತಿ ನೀಡಿಲ್ಲ.
ಇದನ್ನೂ ಓದಿ ; ಹಾಸನ | ಕೆರೆಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು!



















