ಲಕ್ನೋ: ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬದ ಬಗ್ಗೆ ಗಂಭೀರ ಚರ್ಚೆ ಮುಂದುವರಿದಿರುವಂತೆಯೇ, 42 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಕೇಸಿನ ಆರೋಪದಿಂದ 100 ವರ್ಷದ ವೃದ್ಧನನ್ನು ಅಲಹಾಬಾದ್ ಹೈಕೋರ್ಟ್ ಈಗ ಖಲಾಸೆಗೊಳಿಸಿದೆ! 1982ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಸುದೀರ್ಘ 40 ವರ್ಷಗಳ ಕಾಲ ಮೇಲ್ಮನವಿ ಬಾಕಿ ಇತ್ತು. ಇದೀಗ ವೃದ್ಧಾಪ್ಯ ಮತ್ತು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣದ ಕಥೆ ಆರಂಭವಾಗುವುದು 1982ರ ಆಗಸ್ಟ್ 9 ರಂದು. ಉತ್ತರ ಪ್ರದೇಶದ ಹಮೀರಪುರ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುನ್ವಾ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಮೈಕು ಎಂಬಾತ ಗುಂಡು ಹಾರಿಸಿದ್ದರೆ, ಧನಿರಾಮ್ ಮತ್ತು ಸತ್ತಿದೀನ್ ಎಂಬುವವರು ಹತ್ಯೆಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ 1984ರಲ್ಲಿ ವಿಚಾರಣಾ ನ್ಯಾಯಾಲಯವು ಧನಿರಾಮ್ ಮತ್ತು ಸತ್ತಿದೀನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
40 ವರ್ಷಗಳ ಕಾಲ ಬಾಕಿ ಇದ್ದ ಮೇಲ್ಮನವಿ
ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಧನಿರಾಮ್ ಮತ್ತು ಸತ್ತಿದೀನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಬಾಕಿ ಇದ್ದ ಅವಧಿಯಲ್ಲಿ ಇಬ್ಬರಿಗೂ ಜಾಮೀನು ನೀಡಲಾಗಿತ್ತು. ಆದರೆ, ದಶಕಗಳು ಉರುಳಿದರೂ ಪ್ರಕರಣ ಮಾತ್ರ ಇತ್ಯರ್ಥವಾಗಲೇ ಇಲ್ಲ. ಈ ಸುದೀರ್ಘ ಅವಧಿಯಲ್ಲಿ ಮತ್ತೊಬ್ಬ ಆರೋಪಿ ಸತ್ತಿದೀನ್ ಮೃತಪಟ್ಟರೆ, ಈ ಪ್ರಕರಣದಲ್ಲಿ ಗುಂಡು ಹಾರಿಸಿದ ಎನ್ನಲಾದ ಮುಖ್ಯ ಆರೋಪಿ ಮೈಕು ಪೊಲೀಸರಿಗೆ ಸಿಗಲೇ ಇಲ್ಲ. ಕೊನೆಗೆ 100 ವರ್ಷದ ಧನಿರಾಮ್ ಮಾತ್ರ ಏಕೈಕ ಬದುಕುಳಿದ ಅಪೀಲುದಾರರಾಗಿ ಉಳಿದಿದ್ದರು.
ಹೈಕೋರ್ಟ್ ನೀಡಿದ ‘ಬೆನಿಫಿಟ್ ಆಫ್ ಡೌಟ್’
ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. “ಮೇಲ್ಮನವಿ ಇತ್ಯರ್ಥವಾಗಲು ಸಂಭವಿಸಿರುವ ಅತಿಯಾದ ವಿಳಂಬ ಮತ್ತು ಆರೋಪಿಯ ವಯಸ್ಸನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಅಲ್ಲದೆ, ಪ್ರಾಸಿಕ್ಯೂಷನ್ ಮಂಡಿಸಿದ ವಾದದಲ್ಲಿ ಹಲವು ಲೋಪದೋಷಗಳಿರುವುದನ್ನು ಗಮನಿಸಿದ ನ್ಯಾಯಾಲಯ, ಧನಿರಾಮ್ ಅವರಿಗೆ ‘ಬೆನಿಫಿಟ್ ಆಫ್ ಡೌಟ್’ (ಸಂದೇಹದ ಲಾಭ) ನೀಡಿ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.
ಈ ತೀರ್ಪು ದೇಶದ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬವು ಆರೋಪಿಗಳು ಮತ್ತು ಬಲಿಪಶುಗಳ ಕುಟುಂಬಗಳ ಮೇಲೆ ಬೀರುವ ಗಂಭೀರ ಪರಿಣಾಮಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. 100ನೇ ವಯಸ್ಸಿನಲ್ಲಿ ಧನಿರಾಮ್ ಕೊನೆಗೂ ನ್ಯಾಯಾಂಗದ ಸುಳಿಯಿಂದ ಹೊರಬಂದಿದ್ದಾರೆ. ಆದರೆ, ನಿಟ್ಟುಸಿರು ಬಿಡಲೂ ಆಗದ ಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ : 18 ತಿಂಗಳಲ್ಲಿ 20 ಬಾರಿ ಎಸ್ಕೇಪ್ ಆಗಿದ್ದ ಜೈಶ್ ಉಗ್ರ ಆದಿಲ್ ಫಿನಿಶ್!



















