ಕಲಬುರಗಿ | ನಗರದ ಹಿರಿಯ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಎರಡು ದಿನಗಳ ಹಿಂದೆ ಅವರು ತಮ್ಮ ನಿವಾಸದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ರಾಜ್ಯಾದ್ಯಂತ ಆಘಾತ ಮೂಡಿಸಿತ್ತು. ಇದೀಗ ಅವರು ಸಾವಿಗೂ ಮುನ್ನ ಬರೆದಿಟ್ಟಿರುವ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ವೈರಲ್ ಆಗಿರುವ ಡೆತ್ ನೋಟ್ನಲ್ಲಿ ತಮ್ಮ ಸಾವಿಗೆ 11 ಜನರ ಕಿರುಕುಳವೇ ನೇರ ಕಾರಣ ಎಂದು ಪ್ರಭುಲಿಂಗ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, ತಮ್ಮ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಡೆತ್ ನೋಟ್ನಲ್ಲಿ ಕಲಬುರಗಿಯ ಕೆಲ ಸಂಘಟನೆಗಳ ಪ್ರಮುಖರು ಹಾಗೂ ಕೆಲವು ಪತ್ರಕರ್ತರ ಹೆಸರುಗಳನ್ನು ಕೂಡ ಅವರು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಡೆತ್ ನೋಟ್ನಲ್ಲಿ ತಮ್ಮ ಆರ್ಥಿಕ ವ್ಯವಹಾರಗಳ ಕುರಿತು ಸಹ ಪ್ರಭುಲಿಂಗ ನೀಲೂರೆ ವಿವರಿಸಿದ್ದಾರೆ. ಕೆಲವು ಸ್ನೇಹಿತರಿಂದ ಹಣ ಪಡೆದಿದ್ದೇನೆ ಎಂದು ಹೇಳಿರುವ ಅವರು, ಅವರಿಗೆ ಕೆಲವರಿಗೆ ಶೇ.3 ಮತ್ತು ಕೆಲವರಿಗೆ ಶೇ.5 ರಷ್ಟು ಬಡ್ಡಿ ನೀಡಿದ್ದೇನೆ ಎಂದು ಬರೆದಿದ್ದಾರೆ. ಸ್ನೇಹಿತರಿಂದ ಪಡೆದ ಹಣವನ್ನು ಬಿಲ್ಡರ್ ಒಬ್ಬರಿಗೆ ನೀಡಿದ್ದಾಗಿ ಹೇಳಿರುವ ಅವರು, ಆ ಬಿಲ್ಡರ್ ನನ್ನನ್ನು ಮೋಸಗೊಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಇದರ ನಡುವೆ ಪ್ರಭುಲಿಂಗ ನೀಲೂರೆ ಅವರ ಸಾವಿನ ಕುರಿತು ಕಲಬುರಗಿ ನಗರ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಎಸ್.ಡಿ. ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಪ್ರಭುಲಿಂಗ ನೀಲೂರೆ ಅವರ ಪತ್ನಿ ತಮ್ಮ ಪತಿಯ ಸಾವಿನ ಬಗ್ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಸಾವಿನ ಮುನ್ನ ಅವರು ಬರೆದಿರುವ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶ ಹೊರಬರಲಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಿದ್ರಾಮಯ್ಯ ‘ಹೌದು ಇಲಿಯಾ’ ಆಗಿದ್ದಾರೆ | ಆರ್.ಅಶೋಕ್ ಲೇವಡಿ



















