ಉಡುಪಿ : ಯುವಕರು ಮಾದಕ ದ್ರವ್ಯ ಮತ್ತು ಮನೋವಿಕೃತಿಗೊಳಿಸುವ ವಸ್ತುಗಳಿಗೆ ಬಲಿಯಾಗುತ್ತಿರುವುದು ದುರಂತ. ಮಾದಕ ವಸ್ತುಗಳು ಯುವಕರ ಕೈಗೆ ಸಿಗದಂತೆ ಅಗತ್ಯ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು. ಡ್ರಗ್ಸ್ ಮಾಫಿಯಾವನ್ನು ಸರ್ಕಾರ ನಿರ್ಮೂಲನೆ ಮಾಡಲಿ. ಈ ಪುಟ್ಟ ಊರು ವಕ್ವಾಡಿಯಲ್ಲೂ ಡ್ರಗ್ಸ್ ಮಾಫಿಯಾ ಬಾಲ ಬಿಚ್ಚಿದಾಗ ಅದರ ವಿರುದ್ಧ ಯುವಶಕ್ತಿ ಮಿತ್ರ ಮಂಡಲದ ಯುವಕರು ನಿಂತು ಹೋರಾಡಿದ್ದು ಅಭಿನಂದನೀಯ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ವಕ್ವಾಡಿಯ ದಿ | ವಿ.ಕೆ ಮೋಹನ್ ಬಯಲು ರಂಗ ಮಂಟಪದಲ್ಲಿ ನಡೆದ ಯುವಶಕ್ತಿ ಮಿತ್ರ ಮಂಡಲ, ಹೆಗ್ಗಾರ್ ಬೈಲು, ವಕ್ವಾಡಿ ಇದರ 29ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಊರಿನ ಸಮಗ್ರ ಅಭಿವೃದ್ಧಿಗೆ ಯುವಶಕ್ತಿ ಮಿತ್ರ ಮಂಡಲ ನಿರಂತರವಾಗಿ ಶ್ರಮಿಸುವುದರ ಜೊತೆಗೆ, ಊರಿಗೆ ಆಧಾರವಾಗಿ ನಿಂತಿರುವುದು ಪ್ರಶಂಸನೀಯ ಎಂದು ಅವರು ಅಭಿಪ್ರಾಯ ಪಟ್ಟರು.

ನಿವೃತ್ತ ಶಿಕ್ಷಕರಾದ ರಮೇಶ್ ಶೆಟ್ಟಿ ವಕ್ವಾಡಿ, ಅಶೋಕ್ ಶೆಟ್ಟಿ ವಕ್ವಾಡಿ ಹಾಗೂ ಜಾನುವಾರು ಇಲಾಖೆಯ ನಿವೃತ್ತ ಅಧಿಕಾರಿ ಸುಬ್ರಾಯ ಗಾಣಿಗ, ಹಾಲಾಡಿ ಅವರಿಗೆ ಊರ ಗೌರವ ಪ್ರದಾನ ಮಾಡಿ ಮಾತನಾಡಿದ ದಿನೇಶ್ ಹೆಗ್ಡೆ ಜಯರತ್ನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ, ಯುವಶಕ್ತಿಯೇ ದೇಶದ ಶಕ್ತಿ. ಊರು, ನಾಡು ನುಡಿ ಕಟ್ಟಲು ಯುವಶಕ್ತಿ ಮಿತ್ರ ಮಂಡಲ ದುಡಿಯುತ್ತಿರುವುದು ಅಭಿನಂದನಾರ್ಹ. ಊರಿಗೆ ಸೇವೆ ನೀಡಿದವರಿಗೆ ಗೌರವಿಸುವುದು, ಯುವ ಪ್ರತಿಭೆಗಳಿಗೆ ಯುವ ಸ್ಪೂರ್ತಿ ಪುರಸ್ಕಾರ ನೀಡಿ ಸನ್ಮಾನಿಸುವ ಮತ್ತು ಸಮಾಜಮುಖಿ ಕೆಲಸಗಳಿಗೆ ಕೊನೆ ಇರದಿರಲಿ ಎಂದು ಅವರು ಅಭಿಪ್ರಾಯ ಪಟ್ಟರು.
ಶ್ರೀ ನಂದಿಕೇಶ್ವರ ಹಾಗೂ ಶ್ರೀ ಚಿಕ್ಕಮ್ಮ ಸಪರಿವಾರ ದೈವಗಳ ದೈವಸ್ಥಾನಕ್ಕೆ ಸ್ವಾಗತ ಗೋಪುರ ನಿರ್ಮಿಸಿಕೊಟ್ಟ ಶ್ರೀ ಪ್ರಸಿದ್ದಿ ಕನ್ಸ್ಟ್ರಕ್ಷನ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್, ಪ್ರತಾಪ್ ಶೆಟ್ಟಿ ವಕ್ವಾಡಿ ಹಾಗೂ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರುದ್ರ ಭೂಮಿಗೆ ಶ್ರದ್ಧಾಂಜಲಿ ವಾಹನ ನೀಡಲಿರುವ ಉದ್ಯಮಿ ವಕ್ವಾಡಿ ವಿಶ್ವನಾಥ ಶೆಟ್ಟಿ ಅವರಿಗೆ ಸಂಸ್ಥೆಯಿಂದ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ರಾಷ್ಟ್ರೀಯ ಕ್ರೀಡಾ ಪಟುಗಳಾದ ಕುಮಾರಿ ದೇವಿಕಾ ವಿ.ಎಸ್ ಹಾಗೂ ಕುಮಾರಿ ನಂದಿನಿ ಜಿ. ಅವರಿಗೆ ಈ ವರ್ಷದ ಯುವಸ್ಪೂರ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಾವರ ಗ್ರಾಮ ಪಂಚಾಯತ್ ನ ಸದಸ್ಯ ರಾಮಚಂದ್ರ ನಾವಡ ವಹಿಸಿದರು. ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷ ರೊ.ವಿಜಯ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಕೆ.ಡಿ.ಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಸಂಸ್ಥೆಯ ಅಧ್ಯಕ್ಷ ಶಂಕರ್ ಕುಲಾಲ್, ಕಾರ್ಯದರ್ಶಿ ಕಿಶೋರ್ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಪ್ರಸ್ತಾವನೆ ಮಾತುಗಳನ್ನಾಡಿ ಸ್ವಾಗತಿಸಿದರು. ಪತ್ರಕರ್ತ ಶ್ರೀರಾಜ್ ವಕ್ವಾಡಿ ಮತ್ತು ರಾಕೇಶ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಸುಜನ್ ಧನ್ಯವಾದ ಸಮರ್ಪಿಸಿದರು.
ಬಳಿಕ, ಊರಿನ ಅಂಗನವಾಡಿಯ ಮೂರು ಕೆಂದ್ರಗಳ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಊರಿನ ಮಕ್ಕಳಿಗೆ ಸಿನೆಮಾ ನೃತ್ಯ ಸ್ಪರ್ಧೆ ಹೆಜ್ಜೆ ಸಪ್ಪಳ -2026 ನಡೆಯಿತು.
ಇದನ್ನೂ ಓದಿ: ‘ರಾಯ್’ ಆತ್ಮಹತ್ಯೆ ಕೇಸಲ್ಲಿ ಬಿಜೆಪಿ ವಿರುದ್ದ ಬೊಟ್ಟು ಮಾಡಿದ ಪ್ರದೀಪ್ ಈಶ್ವರ್ | ಶಾಸಕರ ತನಿಖೆಗೆ ದಿನೇಶ್ ಕಲ್ಲಹಳ್ಳಿ ಆಗ್ರಹ



















