ನವದೆಹಲಿ/ಕೌಲಾಲಂಪುರ : ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಅವರ ಮಹತ್ವಾಕಾಂಕ್ಷೆಯ ಯೋಜನೆ ಎಂದೇ ಬಿಂಬಿತವಾಗಿದ್ದ ಮಲೇಷ್ಯಾ ‘ಪ್ರೊ10’ (Pro10 Malaysia) ಕ್ರಿಕೆಟ್ ಟೂರ್ನಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಲಾಜಿಸ್ಟಿಕ್ ಸಮಸ್ಯೆಗಳ ಕಾರಣದಿಂದಾಗಿ ಈ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಆಯೋಜಕರು ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಮೂಲ ವೇಳಾಪಟ್ಟಿಯ ಪ್ರಕಾರ, ಇದೇ ಜನವರಿ 30ರಿಂದ ಫೆಬ್ರವರಿ 2ರವರೆಗೆ ಮಲೇಷ್ಯಾದ ಸೆಲಂಗೋರ್ನಲ್ಲಿರುವ ಬಯುಮಾಸ್ ಓವಲ್ನಲ್ಲಿ ಈ ಚೊಚ್ಚಲ ಆವೃತ್ತಿಯ ಪಂದ್ಯಗಳು ನಡೆಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಈಗ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup) ನಂತರ ನಡೆಸಲು ನಿರ್ಧರಿಸಲಾಗಿದೆ. ಕ್ರಿಕೆಟಿಗರು, ಮ್ಯಾಚ್ ರೆಫ್ರಿಗಳು ಮತ್ತು ಮಲೇಷ್ಯಾ ಕ್ರಿಕೆಟ್ ಸಂಸ್ಥೆ (MCA) ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರವೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ವಿಶ್ವಕಪ್ ಮುಗಿದ ಬಳಿಕವಷ್ಟೇ ಹೊಸ ದಿನಾಂಕಗಳನ್ನು ಪ್ರಕಟಿಸಲಾಗುವುದು.
ತಂಡಗಳ ಸಂಖ್ಯೆಯಲ್ಲಿ ಹೆಚ್ಚಳ : ಪೈಪೋಟಿ ಜೋರು
ಟೂರ್ನಿ ಮುಂದೂಡಿಕೆಯಾಗಿದ್ದರೂ, ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯಿದೆ. ಸ್ಪರ್ಧೆಯನ್ನು ಮತ್ತಷ್ಟು ರೋಚಕಗೊಳಿಸುವ ನಿಟ್ಟಿನಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಆಯೋಜಕರು ನಿರ್ಧರಿಸಿದ್ದಾರೆ. ಹಳೆಯ ಯೋಜನೆಯಂತೆ ಕೇವಲ ಮೂರು ತಂಡಗಳು ಭಾಗವಹಿಸಬೇಕಿತ್ತು. ಆದರೆ, ಪರಿಷ್ಕೃತ ಆವೃತ್ತಿಯಲ್ಲಿ ಒಟ್ಟು ನಾಲ್ಕು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇದು ಹೆಚ್ಚಿನ ಪಂದ್ಯಗಳಿಗೆ ಮತ್ತು ಸಮತೋಲಿತ ಪೈಪೋಟಿಗೆ ವೇದಿಕೆ ಒದಗಿಸಲಿದೆ.
ದಿಗ್ಗಜರ ಸಾಥ್ : ರವಿಶಾಸ್ತ್ರಿ ಮತ್ತು ವಿವಿಯನ್ ರಿಚರ್ಡ್ಸ್
ಕಳೆದ ನವೆಂಬರ್ನಲ್ಲಿ ಘೋಷಣೆಯಾಗಿದ್ದ ಈ ಟೂರ್ನಿ, ಕ್ರಿಕೆಟ್ ಜಗತ್ತಿನ ಗಮನ ಸೆಳೆಯಲು ಪ್ರಮುಖ ಕಾರಣ ರವಿಶಾಸ್ತ್ರಿ ಮತ್ತು ವೆಸ್ಟ್ ಇಂಡೀಸ್ನ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ (Sir Vivian Richards). ರವಿಶಾಸ್ತ್ರಿ ಅವರು ಈ ಟೂರ್ನಿಯ ಬೆನ್ನೆಲುಬಾಗಿ ನಿಂತಿದ್ದರೆ, ವಿವಿಯನ್ ರಿಚರ್ಡ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಮಲೇಷ್ಯಾ ಕ್ರಿಕೆಟ್ ಸಂಸ್ಥೆ ಕೂಡ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ವರ್ಷದ ಅಂತ್ಯದಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ನಡೆಸುವ ಭರವಸೆ ನೀಡಿದೆ.
ಇದನ್ನೂ ಓದಿ : ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ!



















